ಕರ್ಥಾರ್ಪುರ ಕಾರಿಡಾರ್: ಪಾಕ್ ನಿಲುವು ಬದಲಿಗೆ ಭಾರತ ಅಸಮಾಧಾನ
ಹೊಸದಿಲ್ಲಿ, ಮಾ.16: ಕರ್ಥಾರ್ಪುರ ಕಾರಿಡಾರ್ ಯೋಜನೆಯ ವಿಷಯದಲ್ಲಿ ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿರುವ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯಾತ್ರಾಸ್ಥಳಕ್ಕೆ ಪ್ರತೀ ದಿನ ಭೇಟಿ ನೀಡುವ ಯಾತ್ರಿಗಳ ಸಂಖ್ಯೆಗೆ ಮಿತಿ ವಿಧಿಸುವುದು, ಪಾವತಿ ಪರ್ಮಿಟ್ ವ್ಯವಸ್ಥೆ ಜಾರಿ ಮುಂತಾದ ಹೊಸ ಪ್ರಸ್ತಾವನೆ ಮೂಲಕ ಪಾಕ್ ತನ್ನ ಈ ಹಿಂದಿನ ನಿಲುವನ್ನು ಬದಲಿಸಿದೆ ಎಂದು ಭಾರತ ಅಸಮಾಧಾನ ಸೂಚಿಸಿದೆ. ಅಲ್ಲದೆ , ಪ್ರತ್ಯೇಕ ಖಾಲಿಸ್ತಾನದ ಬೇಡಿಕೆಗೆ ಪೂರಕವಾಗಿ ‘ಜನಾಭಿಪ್ರಾಯ 2020’ ಎಂಬ ಕಾರ್ಯಕ್ರಮದ ಪ್ರಚಾರಕ್ಕೆ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿರುವ ಸಿಖ್ ಗುಂಪುಗಳು ಪಾಕಿಸ್ತಾನದಲ್ಲಿ ಕಾರ್ಯಕ್ರಮ ನಡೆಸುವುದರ ಬಗ್ಗೆಯೂ ಭಾರತ ಸರಕಾರ ಆತಂಕ ಸೂಚಿಸಿದೆ.
ಭಾರತದಲ್ಲಿರುವ ಡೇರಾ ಬಾಬಾ ನಾನಕ್ ಮತ್ತು ಪಾಕಿಸ್ತಾನದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಸಂಪರ್ಕಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಯ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ಖಾನ್ ಆರಂಭದಲ್ಲಿ ಉದಾರ ಮತ್ತು ಮುಕ್ತ ನಿಲುವು ವ್ಯಕ್ತಪಡಿಸಿದ್ದರು. ಆದರೆ ಈ ವಾರ ನಡೆದ ಮಾತುಕತೆಯಲ್ಲಿ ಪಾಕ್ನ ನಿಲುವು ಸೀಮಿತ ಮತ್ತು ಪರಿಮಿತ ಸ್ಥಿತಿಗೆ ಬದಲಾಗಿದೆ ಎಂದು ಭಾರತ ಅಸಮಾಧಾನ ಸೂಚಿಸಿದೆ.