ಲೋಕಸಭಾ ಚುನಾವಣೆ ಕೊನೆಯ ಅಭ್ಯರ್ಥಿ ಘೋಷಿಸಿದ ಆಪ್
ಹೊಸದಿಲ್ಲಿ, ಮಾ. 17: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದಿಲ್ಲಿ ಸಂಸದೀಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಲ್ಬೀರ್ ಸಿಂಗ್ ಜಾಖರ್ ಅವರನ್ನು ಅಮ್ ಆದ್ಮಿ ಪಕ್ಷ ರವಿವಾರ ಘೋಷಿಸಿದೆ.
ಇದು ಆಪ್ನ ಲೋಕಸಭಾ ಅಭ್ಯರ್ಥಿಗಳ ಅಂತಿಮ ಪಟ್ಟಿ. 45ರ ಹರೆಯದ ಜಾಖರ್ ಅವರು ದ್ವಾರ್ಕಾ ಕೋರ್ಟ್ ಬಾರ್ ಅಸೋಶಿಯೇಶನ್ನ ಅಧ್ಯಕ್ಷ ಹಾಗೂ ಅಖಿಲ ದಿಲ್ಲಿ ಜಿಲ್ಲಾ ನ್ಯಾಯಾಲಯ ಬಾರ್ ಅಸೋಶಿಯೇಶನ್ನ ಸಹಕಾರ ಸಮಿತಿಯ ಅಧ್ಯಕ್ಷ. ಅವರು ದಿಲ್ಲಿ ಬಾರ್ ಕೌನ್ಸಿಲ್, ರೋಹಿಣಿ ಕೋರ್ಟ್ ಬಾರ್ ಕೌನ್ಸಿಲ್ ಹಾಗೂ ನ್ಯೂದಿಲ್ಲಿ ಬಾರ್ ಅಸೋಸಿಯೇಶನ್ನ ಸದಸ್ಯ. ದಿಲ್ಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಆಪ್ ಮಾರ್ಚ್ 2ರಂದು ಘೋಷಿಸಿತ್ತು. ದಿಲ್ಲಿಯಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.
ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಜಾಖರ್ ಅವರು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಹಾಗೂ ಅರವಿಂದ ಕೇಜ್ರಿವಾಲ್ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಚಳವಳಿಯಲ್ಲಿ 2011ರಿಂದ ತೊಡಗಿಸಿಕೊಂಡಿದ್ದರು ಎಂದು ದಿಲ್ಲಿ ಸಚಿವ ಗೋಪಾಲ್ ರಾಯ್ ರವಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.