ಚೌಕಿದಾರ್ ಬೇಕಾಗಿರುವುದು ಶ್ರೀಮಂತರಿಗೆ ಹೊರತು ರೈತರಿಗಲ್ಲ: ಪ್ರಿಯಾಂಕಾ
ಪ್ರಯಾಗ್ರಾಜ್, ಮಾ. 18: ಪ್ರಯಾಗ್ರಾಜ್ ಹಾಗೂ ಗಂಗಾಪುರ ಜಿಲ್ಲೆಗಳಲ್ಲಿ ಗಂಗಾ ಯಾತ್ರೆಯ ಮೂಲಕ ಚುನಾವಣಾ ಪ್ರಚಾರ ಆರಂಭಿಸಿರುವ ಉತ್ತರಪ್ರದೇಶ ಪೂರ್ವ ವಲಯದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರ ಚೌಕಿದಾರ್ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಚೌಕಿದಾರರರು ಬೇಕಾಗಿರುವುದು ಶ್ರೀಮಂತರಿಗೆ ಹೊರೆತು ರೈತರಿಗೆ ಅಲ್ಲ ಎಂದು ಅವರು ಹೇಳಿದ್ದಾರೆ.
ಮೂರು ದಿನಗಳ ಕಾಲ ದೋಣಿ ಪಯಣದಲ್ಲಿ ಪ್ರಿಯಾಂಕಾ ಪ್ರಯಾಗ್ ರಾಜ್ನಿಂದ ವಾರಣಾಸಿಗೆ ತೆರಳಲಿದ್ದಾರೆ. ಈ ಸಂದರ್ಭ ಅವರು ನದಿ ದಂಡೆಯಲ್ಲಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರಲ್ಲಿ ಮತ ನೀಡುವಂತೆ ಮನವಿ ಮಾಡಲಿದ್ದಾರೆ ಎಂದರು.
‘‘ನಿನ್ನೆ ನಾನು ರೈತರ ಗುಂಪೊಂದನ್ನು ಭೇಟಿಯಾದೆ. ಉತ್ತರಪ್ರದೇಶದ ಬಟಾಟೆ ಬೆಳೆಸುವ ರೈತರು ಅವರು. ಅವರಲ್ಲಿ ಓರ್ವ ರೈತ ಹೇಳಿದರು, ಚೌಕಿದಾರರು ಶ್ರೀಮಂತರಿಗೆ ಬೇಕಾಗಿರುವುದು. ನಾವು ರೈತರು. ನಮಗೆ ನಾವೇ ಚೌಕಿದಾರರು,’’ ಎಂದು ಅವರು ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ದೇಶದ ಮುಖ್ಯ ಶಕ್ತಿ ಆಡಳಿತಾರೂಢ ಪಕ್ಷ ಎಂದು ಘೋಷಿಸುವ ಬಿಜೆಪಿಯ ‘ನಾನು ಕೂಡ ಚೌಕಿದಾರ್’ ಎಂಬ ಅಭಿಯಾನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮೊದಲಿಗೆ ಟ್ವಿಟ್ಟರ್ ಹ್ಯಾಂಡಲ್ನ ತನ್ನ ಹೆಸರಿನೊಂದಿಗೆ ‘ಚೌಕಿದಾರ್’ ಪದವನ್ನು ಸೇರಿಸಿದ್ದರು.
ಮನೈಯಾ ಘಾಟ್ನಿಂದ ಆರಂಭವಾದ ಈ ದೋಣಿ ಯಾನ ವಾರಣಾಸಿಯ ಅಸ್ಸಿ ಘಾಟ್ನಲ್ಲಿ ಕೊನೆಗೊಳ್ಳಲಿದೆ.