ಸೈಯದ್ ಅಲಿ ಗೀಲಾನಿ ಅಳಿಯನ ವಿಚಾರಣೆ: ಈ.ಡಿ.ಗೆ ಅನುಮತಿ ನೀಡಿದ ನ್ಯಾಯಾಲಯ
ಜಮ್ಮು ಕಾಶ್ಮೀರ, ಮಾ. 20: ಲಷ್ಕರೆ ತಯ್ಯಿಬದ ವರಿಷ್ಠ ಹಾಫಿಝ್ ಸಯೀದ್ಗೆ ಸಂಬಂಧಿಸಿದ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಕಾಶ್ಮೀರಿ ಪತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಅಳಿಯ ಅಲ್ತಾಫ್ ಶಾ ಹಾಗೂ ಇತರರ ವಿಚಾರಣೆಗೆ ವಿಶೇಷ ಎನ್ಐಎ ನ್ಯಾಯಾಲಯ ಬುಧವಾರ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.
ಅಲ್ತಾಫ್ ಶಾ ಅಲ್ಲದೆ, ಪಾಕಿಸ್ತಾನಿ ನಾಯಕರೊಂದಿಗೆ ಗೆಳೆತನ ಹೊಂದಿದ್ದಾರೆಂದು ಹೇಳಲಾದ ಉದ್ಯಮಿ ಝಹೂರ್ ವಾಟಾಲಿ, ಯುಎಇ ಮೂಲದ ಉದ್ಯಮಿ ನವಲ್ ಕಿಶೋರ್ ಕಪೂರ್ ಅವರನ್ನು ಕೂಡ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ವಿಶೇಷ ನ್ಯಾಯಮೂರ್ತಿ ರಾಕೇಶ್ ಸ್ಯಾಲ್ ಅವಕಾಶ ನೀಡಿದ್ದಾರೆ.
ದಿಲ್ಲಿಯ ತಿಹಾರ್ ಕಾರಾಗೃಹದಲ್ಲಿ ಇರಿಸಲಾಗಿರುವ ಮೂವರನ್ನು ಜಾರಿ ನಿರ್ದೇಶನಾಲಯ ಮಾರ್ಚ್ 24 ಹಾಗೂ ಎಪ್ರಿಲ್ 5ರ ನಡುವೆ ಮೂರು ದಿನಗಳ ಕಾಲ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸೈಯದ್ ಸಲಾಹುದ್ದೀನ್ ವಿರುದ್ಧದ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರದಲ್ಲಿರುವ ಆತನ 13 ಸೊತ್ತುಗಳನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಮುಟ್ಟಗೋಲು ಹಾಕಿಕೊಂಡಿತ್ತು.