ಮೋದಿ ಆಡಳಿತದಲ್ಲಿ 3.2 ಕೋಟಿ ಉದ್ಯೋಗ ಕಳೆದುಕೊಂಡ ಕಾರ್ಮಿಕರು
ನ್ಯಾಶನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿ ಉಲ್ಲೇಖಿಸಿದ ಕಾಂಗ್ರೆಸ್
ಹೊಸದಿಲ್ಲಿ,ಮಾ.21: ಮೋದಿ ಸರಕಾರದ ಆಡಳಿತದಲ್ಲಿ 3.2 ಕೋಟಿ ಹಂಗಾಮಿ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್ ಪಕ್ಷವು, ಈ ನಂಬಿಕೆ ದ್ರೋಹಕ್ಕಾಗಿ ಭಾರತೀಯರು ಸಿಡಿದೇಳಬೇಕು ಮತ್ತು ಬಿಜೆಪಿಯನ್ನು ಪರಾಭವಗೊಳಿಸಬೇಕು ಎಂದು ಹೇಳಿದೆ.
2011-12 ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ 3.2 ಕೋ.ಹಂಗಾಮಿ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಮತ್ತು ಈ ಪೈಕಿ ಸುಮಾರು ಮೂರು ಕೋ.ಜನರು ಕೃಷಿಕ್ಷೇತ್ರದಲ್ಲಿ ದುಡಿಯುತ್ತಿದ್ದರು ಎಂಬ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ನ ವರದಿಯನ್ನು ಆಂಗ್ಲ ದೈನಿಕವೊಂದು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಕಾಂಗ್ರೆಸ್ ದಾಳಿ ನಡೆಸಿದೆ.
‘‘ಬಿಜೆಪಿಯು ಭಾರತದ ಉದ್ಯೋಗಗಳನ್ನು ಕೊಳ್ಳೆ ಹೊಡೆಯುತ್ತಿದೆ. ಮೋದಿ ಸರಕಾರದಡಿ 3.2 ಕೋ.ಹಂಗಾಮಿ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. 4,7 ಕೋ.ಯುವಜನರೂ ನಿರುದ್ಯೋಗಿಗಳಾಗಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಂದ ಬಚ್ಚಿಡುತ್ತಿರುವ ಕಟು ವಾಸ್ತವವಾಗಿದೆ. ಈ ನಂಬಿಕೆ ದ್ರೋಹಕ್ಕಾಗಿ ಜನರು ಬಿಜೆಪಿಯನ್ನು ಸೋಲಿಸಬೇಕು ’’ಎಂದು ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟಿಸಿದ್ದಾರೆ.