ಮನೋಹರ್ ಪಾರಿಕ್ಕರ್ ಪಾರ್ಥಿವ ಶರೀರ ಇರಿಸಿದ್ದ ಕೋಣೆಯ ‘ಶುದ್ಧೀಕರಣ’: ವಿವಾದ ಸೃಷ್ಟಿ
ಹೊಸದಿಲ್ಲಿ, ಮಾ.24: ಗೋವಾದ ಮಾಜಿ ಸಿಎಂ ಮನೋಹರ್ ಪಾರಿಕ್ಕರ್ ರ ಪಾರ್ಥಿವ ಶರೀರವನ್ನು ಸಾರ್ವಜನಿಕರು ವೀಕ್ಷಿಸಲು ಇರಿಸಲಾಗಿದ್ದ ಕಲಾ ಅಕಾಡಮಿಯನ್ನು ‘ಶುದ್ಧೀಕರಣ’ ನಡೆಸಿದ ವಿಚಾರವೀಗ ಭಾರೀ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಗೋವಾ ಕಲೆ ಮತ್ತು ಸಂಸ್ಕೃತಿ ಸಚಿವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಅಕಾಡಮಿಯ ಕೆಲ ಸಿಬ್ಬಂದಿಯ ಆದೇಶದಂತೆ ನಾಲ್ಕು ಪುರೋಹಿತರು ಮಂತ್ರಗಳನ್ನು ಪಠಿಸುತ್ತಾ ‘ಶುದ್ಧೀಕರಣ’ ಪ್ರಕ್ರಿಯೆ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ವಿಡಿಯೋ ಮತ್ತು ಫೋಟೊಗಳು ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದ್ದು, ‘ಪಾರಿಕ್ಕರ್ ರಿಗೆ ಅವಮಾನ’ ಎಂದು ಭಾರೀ ಆಕ್ರೋಶ ವ್ಯಕ್ತವಾಗಿದೆ.
“ಇದು ಮುಖ್ಯಮಂತ್ರಿಗೆ ಮಾಡಿದ ಅವಮಾನ” ಎಂದು ಹೆಸರು ಹೇಳಲಿಚ್ಛಿಸದ ಸರಕಾರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ತನ್ನ ಸಚಿವಾಲಯದ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಾ ಅಕಾಡೆಮಿ ಅವೈಜ್ಞ್ಞಾನಿಕ ಚಟುವಟಿಕೆಗಳನ್ನು ಉತ್ತೇಜಿಸುವಂತಿಲ್ಲ ಎಂದು ಗೋವಾದ ಕಲೆ ಹಾಗೂ ಸಂಸ್ಕೃತಿ ಸಚಿವ ಗೋವಿಂದ ಗಾವಡೆ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
“ಕಲಾ ಅಕಾಡೆಮಿ ಆವರಣದಲ್ಲಿ ಆಚರಣೆಯಾಗಿ ಕೆಲವು ಚಟುವಟಿಕೆಗಳನ್ನು ನಡೆಸಿರುವುದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ನಾನು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ನಾವು ಸರಕಾರಿ ಕಟ್ಟಡದ ಒಳಗಡೆ ಅವೈಜ್ಞಾನಿಕ ಚಟುವಟಿಕೆಗಳನ್ನು ಉತ್ತೇಜಿಸಲು ಸಾಧ್ಯವಿಲ್ಲ” ಎಂದು ಗಾವಡೆ ಹೇಳಿದ್ದಾರೆ.
“ಆದಾಗ್ಯೂ, ಅಲ್ಲಿ ನಡೆಸಿದ ಕಾರ್ಯಕ್ರಮ ಯಾವ ರೀತಿಯದ್ದು ಎಂಬ ಬಗ್ಗೆ ನನಗೆ ಅರಿವಿರಲಿಲ್ಲ. ಕಲಾ ಅಕಾಡೆಮಿ ಸಿಬ್ಬಂದಿ ಸರಕಾರದ ಪೂರ್ವಾನುಮತಿ ಪಡೆದು ವರ್ಷಕ್ಕೊಮ್ಮೆ ಧಾರ್ಮಿಕ ಆಚರಣೆ ನಡೆಸುತ್ತದೆ. ಈ ಪ್ರಕರಣದಲ್ಲಿ ನನ್ನ ಗಮನಕ್ಕೆ ಆಚರಣೆ ನಡೆಸಲಾಗಿದೆ” ಎಂದು ಗಾವಡೆ ತಿಳಿಸಿದ್ದಾರೆ.