ಚೌಕಿದಾರನಾಗಲು ಸಾಧ್ಯವಿಲ್ಲ, ನಾನು ಬ್ರಾಹ್ಮಣ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ, ಮಾ. 24: ಟ್ವಿಟರ್ನಲ್ಲಿ ಹೆಸರಿನ ಪೂರ್ವಪದವಾಗಿ 'ಚೌಕಿದಾರ್' (ಕಾವಲುಗಾರ) ಅನ್ನು ನಾನು ಸೇರಿಸಿಲ್ಲ. ಯಾಕೆಂದರೆ, ನಾನು ಬ್ರಾಹ್ಮಣ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ತಮಿಳು ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
“ನಾನು ಟ್ವಿಟರ್ನನಲ್ಲಿ ಹೆಸರನ್ನು 'ಚೌಕಿದಾರ್ ಸುಬ್ರಮಣಿಯನ್ ಸ್ವಾಮಿ' ಎಂದು ಬದಲಾಯಿಸಿಲ್ಲ. ಯಾಕೆಂದರೆ ನಾನು ಬ್ರಾಹ್ಮಣ. ನಾನು ಚೌಕಿದಾರ್ ಆಗಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಅವರು ಹೀಗೆ ಹೇಳಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
''ನಾನು ಚೌಕಿದಾರನಾಗಲು ಸಾಧ್ಯವಿಲ್ಲ. ಯಾಕೆಂದರೆ, ನಾನು ಬ್ರಾಹ್ಮಣ. ಬ್ರಾಹ್ಮಣರು ಚೌಕಿದಾರರಾಗಲು ಸಾಧ್ಯವಿಲ್ಲ. ಇದು ಸತ್ಯ. ಚೌಕಿದಾರರು ನೀಡಿದ ಆದೇಶವನ್ನು ಪಾಲಿಸಬೇಕು. ಅದನ್ನೇ ಎಲ್ಲ ನಿಯೋಜಿತ ಚೌಕಿದಾರರು ನಿರೀಕ್ಷಿಸುತ್ತಾರೆ. ಆದುದರಿಂದ. ನಾನು ಚೌಕಿದಾರನಾಗಲಾರೆ'' ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
'ನಾನು ಕೂಡ ಚೌಕಿದಾರ್' ಅಭಿಯಾನ ಆರಂಭಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಟ್ವಿಟ್ಟರ್ ಹ್ಯಾಂಡಲ್ಗೆ 'ಚೌಕಿದಾರ್' ಪದವನ್ನು ಸೇರಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಸುಬ್ರಮಣಿಯನ್ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.