ಎನ್ಎಸ್ಎ ದೋವಲ್ ಮತ್ತು ಅಸ್ತಾನಾರ ದೂರವಾಣಿ ಕರೆಗಳನ್ನೆಂದೂ ಕದ್ದಾಲಿಸಿರಲ್ಲ
ನ್ಯಾಯಾಲಯದಲ್ಲಿ ಸಿಬಿಐ ಹೇಳಿಕೆ
ಹೊಸದಿಲ್ಲಿ,ಮಾ.26: ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ಎಸ್ಎ) ಅಜಿತ ದೋವಲ್ ಮತ್ತು ಮಾಜಿ ಸಿಬಿಐ ಅಧಿಕಾರಿ ರಾಕೇಶ್ ಅಸ್ತಾನಾ ಅವರ ದೂರವಾಣಿ ಕರೆಗಳನ್ನೆಂದಿಗೂ ಕದ್ದಾಲಿಸಲಾಗಿಲ್ಲ ಎಂದು ಸಿಬಿಐ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ರಾಷ್ಟ್ರೀಯ ಭದ್ರತೆಯನ್ನು ಕಾಯ್ದುಕೊಳ್ಳಲು ದೂರವಾಣಿ ಕರೆಗಳನ್ನು ಕದ್ದಾಲಿಸುವ ಮುನ್ನ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ ಎಂದು ಕದ್ದಾಲಿಕೆ ಆರೋಪ ಕುರಿತು ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ತನ್ನ ಉತ್ತರದಲ್ಲಿ ಸಿಬಿಐ ತಿಳಿಸಿದೆ.
ಯಾವುದೇ ಕಾಲಘಟ್ಟದಲ್ಲಿಯೂ ದೋವಲ್ ಮತ್ತು ಅಸ್ತಾನಾರ ದೂರವಾಣಿ ಕರೆಗಳನ್ನು ಅಕ್ರಮವಾಗಿ ಕದ್ದಾಲಿಸಿಲ್ಲ. ಭಾರತೀಯ ಟೆಲಿಗ್ರಾಫ್ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದುಕೊಂಡ ಬಳಿಕವೇ ದೂರವಾಣಿ ಕರೆಗಳನ್ನು ಟ್ಯಾಪ್ ಮಾಡಲಾಗುತ್ತದೆ ಎಂದು ಅದು ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.
ಆಗಿನ ಸಿಬಿಐ ಮುಖ್ಯಸ್ಥ ಅಲೋಕ ವರ್ಮಾ ಅವರ ಆದೇಶದಂತೆ ಈ ಇಬ್ಬರು ಅಧಿಕಾರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿತ್ತು ಎಂಬ ಆರೋಪಗಳ ಕುರಿತು ತನಿಖೆ ನಡೆಸುವಂತೆ ಅರ್ಜಿದಾರ ಸಾರ್ಥಕ್ ಚತುರ್ವೇದಿ ಕೋರಿದ್ದಾರೆ.