ವಯನಾಡ್: ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧೆ ?
ತಿರುವನಂತಪುರಂ, ಮಾ. 27: ರಾಹುಲ್ ಗಾಂಧಿ ವಯನಾಡಿನಿಂದ ಲೋಕಸಭೆಗೆ ಸ್ಪರ್ಧಿಸುವುದಿದ್ದರೆ ಈಗಾಗಲೇ ಕೇರಳದ ಬಿಜೆಪಿ ಮಿತ್ರ ಪಕ್ಷ ಬಿಡಿಜೆಎಸ್ ಪಾಲಾಗಿರುವ ಈ ಕ್ಷೇತ್ರವನ್ನು ಬಿಜೆಪಿ ತಮಗೆ ಬಿಟ್ಟುಕೊಡಬೇಕೆಂದು ಕೇಳುತ್ತಿದೆ. ಆದ್ದರಿಂದ ಬಿಡಿಜೆಎಸ್ ತೃಶೂರ್, ವಯನಾಡ್ ಲೋಕಸಭಾ ಸೀಟುಗಳಿಗೆ ತನ್ನ ಅಭ್ಯರ್ಥಿಯನ್ನು ಈವರೆಗೂ ಘೋಷಿಸಿಲ್ಲ.
ರಾಹುಲ್ ವಯನಾಡಿನಿಂದ ಅಭ್ಯರ್ಥಿಯಾಗುವುದಿದ್ದರೆ ಬಿಜೆಪಿಯ ರಾಷ್ಟ್ರೀಯ ನಾಯಕನನ್ನು ಅವರ ವಿರುದ್ಧ ಸ್ಪರ್ಧೆಗಿಳಿಸಲು ಕೇರಳ ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಮೃತಿ ಇರಾನಿಯೇ ಇಲ್ಲಿಯೂ ಸ್ಪರ್ಧಿಸಬೇಕೆಂದು ಬಿಜೆಪಿ ಬಯಸುತ್ತಿದೆ. ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪ್ಪಳ್ಳಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದು, ಅವರು ಒಂದೋ ತೃಶೂರಿನಿಂದ ಅಥವಾ ವಯನಾಡಿನಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ವಯನಾಡಿನಿಂದ ಸ್ಪರ್ಧಿಸುವುದಿಲ್ಲವಾದರೆ ತುಷಾರ್ ವಯನಾಡಿನಿಂದಲೇ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ತುಷಾರ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ಅವರಿಗೆ ರಾಜ್ಯಸಭಾ ಸದಸ್ಯ ಕೊಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.