ಅರ್ಥಶಾಸ್ತ್ರಜ್ಞರ ಜೊತೆ ಸಮಾಲೋಚಿಸಿ ಕನಿಷ್ಟ ಆದಾಯ ಯೋಜನೆಯ ನಿರ್ಧಾರ: ರಾಹುಲ್
ಜೈಪುರ, ಮಾ.27: ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಹಿತ ಖ್ಯಾತ ಅರ್ಥಶಾಸ್ತ್ರಜ್ಞರ ಜೊತೆ ಸಮಾಲೋಚಿಸಿದ ಬಳಿಕ ದೇಶದ ಶೇ.20ರಷ್ಟು ಕಡುಬಡವ ಕುಟುಂಬದವರಿಗೆ ಕನಿಷ್ಟ ಖಾತರಿ ಆದಾಯ ಯೋಜನೆ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದ ಪ್ರತೀ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣ ವರ್ಗಾಯಿಸುವ ಪ್ರಧಾನಿ ಮೋದಿಯ ಭರವಸೆ ಹುಸಿಯಾದಾಗ, ಬಡವರಿಗೆ ನೆರವಾಗುವ ಯೋಜನೆಯನ್ನು ರೂಪಿಸುವ ಬಗ್ಗೆ ಸರಕಾರ ನಿರ್ಧರಿಸಿತು. ಅದರಂತೆ ಈ ಬಗ್ಗೆ ಹೆಚ್ಚಿನ ಪ್ರಚಾರ, ಆಡಂಬರವಿಲ್ಲದೆ ರಘುರಾಮ್ ರಾಜನ್ ಸಹಿತ ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರ ಜೊತೆ ಸಮಾಲೋಚಿಸಲಾಗಿದೆ.
6 ತಿಂಗಳ ಸಮಾಲೋಚನೆಯ ಬಳಿಕ ‘ನ್ಯಾಯ’ (ನ್ಯೂನತಮ್ ಆಯ ಯೋಜನ ‘ನ್ಯಾಯ’)ವನ್ನು ರೂಪಿಸಲಾಗಿದೆ. ಅದರಂತೆ ತಿಂಗಳಿಗೆ ಕನಿಷ್ಟ 12 ಸಾವಿರ ರೂ. ಆದಾಯ ಇರಬೇಕು ಎಂದು ಲೆಕ್ಕಾಚಾರ ಹಾಕಿದ್ದೇವೆ. 5 ಕೋಟಿ ಕುಟುಂಬದಲ್ಲಿ ಶೇ.20ರಷ್ಟಿರುವ ಕಡು ಬಡವರಿಗೆ ರೂಪಿಸಲಾಗಿರುವ ಈ ಯೋಜನೆಯನ್ನು ತಮ್ಮ ಪಕ್ಷ ಸರಕಾರ ರಚಿಸಿದರೆ ಖಂಡಿತಾ ಜಾರಿಗೊಳಿಸುತ್ತೇವೆ ಎಂದು ರಾಹುಲ್ ಹೇಳಿದರು.
2014ರಲ್ಲಿ ಅದೃಶ್ಟವಶಾತ್ ಅವರಿಗೊಂದು ಅವಕಾಶ ಒದಗಿಬಂತು. ಅದು ಅನಿರೀಕ್ಷಿತವಾಗಿ ಒದಗಿ ಬಂದ ಅದೃಷ್ಟ. ಆದರೆ ದ್ವೇಷಭಾವನೆಯನ್ನು ಪ್ರಸಾರ ಮಾಡುವವರು ಸೋಲುತ್ತಾರೆ ಮತ್ತು ಪ್ರೀತಿಯ ಭಾವನೆ ಪ್ರಸಾರ ಮಾಡುವವರು ಅಂತಿಮವಾಗಿ ಗೆಲ್ಲುತ್ತಾರೆ ಎಂದು ರಾಹುಲ್ ಹೇಳಿದರು.