ದಕ್ಷಿಣ ಕಾಶ್ಮೀರದಲ್ಲಿ ಎನ್ಕೌಂಟರ್: ಮೂವರು ಉಗ್ರರು ಹತ್ಯೆ
ಶ್ರೀನಗರ, ಮಾ. 28: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಲಷ್ಕರೆ ತಯ್ಯಿಬದ ಮೂವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಪಿಯಾನದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಿಆರ್ಪಿಎಫ್, ಸೇನೆ ಹಾಗೂ ಜಮ್ಮುಕಾಶ್ಮೀರ ಪೊಲೀಸರ ಜಂಟಿ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಗುರುವಾರ ಬೆಳಗ್ಗೆ ದಕ್ಷಿಣ ಕಾಶ್ಮೀರ ಜಿಲ್ಲೆಯ ಕೆಲ್ಲಾರ್ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ. ‘‘ಹತ ಉಗ್ರರನ್ನು ಸಜಾದ್ ಖಂಡೆ, ಅಕಿಬ್ ಅಹ್ಮದ್ ದಾರ್ ಹಾಗೂ ಬಶರತ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪುಲ್ವಾಮದ ನಿವಾಸಿಗಳು’’ ಎಂದು ಅವರು ತಿಳಿಸಿದ್ದಾರೆ. ಉಗ್ರರು ಭದ್ರತಾ ಸ್ಥಾವರಗಳ ಮೇಲೆ ದಾಳಿ ಹಾಗೂ ನಾಗರಿಕರ ಮೇಲೆ ದೌರ್ಜನ್ಯ ಸಹಿತ ಸರಣಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story