ಮಗಳನ್ನು ಕೊಂದು ಹೆತ್ತವರ ಆತ್ಮಹತ್ಯೆ
ದಲಿತ ಯುವಕನನ್ನು ಪ್ರೀತಿಸಿದ ಕಾರಣ
ಸೇಲಂ, ಎ. 2: ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂನ ಕೊಂಡಲಂಪೆಟ್ಟಿಯಲ್ಲಿ ನಡೆದಿದೆ.
ನೇಯ್ಗೆ ವೃತ್ತಿ ಮಾಡುತ್ತಿದ್ದ ರಾಜ್ಕುಮಾರ್ (43), ಪತ್ನಿ ಶಾಂತಿ (32) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮಗಳು ರಮ್ಯ ಲೋಷಿನಿ (19) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದರೂ ಕೊಲೆ ಮಾಡಲಾಗಿದೆ ಎಂದು ಪೋಸ್ಟ್ಮಾರ್ಟಂ ವರದಿಯಲ್ಲಿ ತಿಳಿದುಬಂದಿದೆ.
ನಿನ್ನೆ ಬೆಳಗ್ಗೆ 8 ಗಂಟೆಯ ಸುಮಾರಿಗೆ ನೆರೆಮನೆಯವರು ಬಂದು ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡ ವಿಷಯ ಬೆಳಕಿಗೆ ಬಂದಿದೆ. ಆದರೆ ಪೋಸ್ಟ್ಮಾರ್ಟಂ ಬಳಿಕ ರಮ್ಯ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದುಬಂತು.
ಸ್ಥಳಕ್ಕೆ ಧಾವಿಸಿದ ರಮ್ಯಾಳ ಪ್ರಿಯಕರನನ್ನು ಪೊಲೀಸರು ವಿಚಾರಣೆ ನಡೆಸಿದರು. ದಲಿತನಾದ ತಾನು ರಮ್ಯಾಳನ್ನು ಪ್ರೀತಿಸುತ್ತಿದ್ದುದನ್ನು ಆಕೆಯ ಹೆತ್ತವರು ವಿರೋಧಿಸಿದ್ದರು ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
Next Story