10 ಕೈದಿಗಳ ಬಿಡುಗಡೆಗೆ ಪಾಕಿಸ್ತಾನಕ್ಕೆ ಔಪಚಾರಿಕ ಪತ್ರ ಬರೆದ ಭಾರತ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ. 3: ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಪೂರ್ಣಗೊಳಿಸಿದ 10 ಮಂದಿ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ವಾಪಾಸ್ ಕಳುಹಿಸಲು ಅಗತ್ಯದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಭಾರತ ಮಂಗಳವಾರ ಪಾಕಿಸ್ತಾನಕ್ಕೆ ಔಪಚಾರಿಕ ಪತ್ರ ಬರೆದಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಆರೋಪಿಯಾಗಿರುವ ಕುಲಭೂಷಣ್ ಜಾಧವ್ ಸಹಿತ ಐವರು ಭಾರತೀಯ ಪ್ರಜೆಗಳಿಗೆ ರಾಜತಾಂತ್ರಿಕರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಆಗ್ರಹಿಸಿ ಕೂಡ ಭಾರತ ಪಾಕಿಸ್ತಾನಕ್ಕೆ ಪತ್ರ ಬರೆದಿದೆ. ಶಿಕ್ಷೆ ಪೂರ್ಣಗೊಂಡ ಹಾಗೂ ನಾಗರಿಕತ್ವ ದೃಢೀಕರಣಗೊಂಡ ಹೊರತಾಗಿಯು ಪಾಕಿಸ್ತಾನದ ಕಸ್ಟಡಿಯಲ್ಲಿ ಬಹುಕಾಲದಿಂದ ಬಾಕಿ ಇರುವ ಭಾರತೀಯ ಕೈದಿಗಳ ಬಿಡುಗಡೆ ಹಾಗೂ ವಾಪಸಾತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನ ಹೈಕಮಿಷನ್ಗೆ ಔಪಚಾರಿಕ ಪತ್ರ ರವಾನಿಸಿದೆ.
ಪಾಕಿಸ್ತಾನದ ಕಸ್ಟಡಿಯಲ್ಲಿರುವ ಭಾರತೀಯ ನಾಗರಿಕರ ವರ್ಗದಲ್ಲಿ ಕುಲಭೂಷಣ್ ಜಾಧವ್ ಅವರೊಂದಿಗೆ ಮುಹಮ್ಮದ್ ಜಾವೈದ್, ಅಬ್ದುಲ್ ಹಮೀದ್, ಮುಹಮ್ಮದ್ ಇಸ್ಮಾಯಿಲ್, ಝುಲ್ಫಿಕರ್ ಅಲಿ ಅವರನ್ನು ಕೂಡ ಸೇರಿಸಲಾಗಿದೆ.