ರಾಯ್ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಮಾಜಿ ಕಾಂಗ್ರೆಸ್ ನಾಯಕನನ್ನು ಕಣಕ್ಕಿಳಿಸಿದ ಬಿಜೆಪಿ
ಲಕ್ನೊ, ಎ. 4: ರಾಯ್ಬರೇಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಗುರುವಾರ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ.
2016ರ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ಎರಡನೇ ಬಾರಿ ಆಯ್ಕೆಯಾಗಿದ್ದರು. ಕಳೆದ ವರ್ಷ ಅವರು ಕಾಂಗ್ರೆಸ್ ತೊರೆದಿದ್ದರು. ಬಿಜೆಪಿ ಅವರನ್ನು ಈ ಬಾರಿ ರಾಯ್ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿಸಿದೆ.
ಅಝಮ್ಗಢ ಕ್ಷೇತ್ರದಲ್ಲಿ ಭೋಜ್ಪುರಿ ಗಾಯಕ ದಿನೇಶ್ ಲಾಲ್ ಯಾದವ್ ಮಾಜಿ ಮುಖ್ಯಮಂತ್ರಿ ಹಾಗೂ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಎಸ್ಪಿ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸ್ವರ್ಧಿಸಲಿರುವ ಮಣಿಪುರಿ ಲೋಕಸಭಾ ಕ್ಷೇತ್ರಕ್ಕೆ ಪ್ರೇಮ್ ಸಿಂಗ್ ಶಕ್ಯಾ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೆಸರಿಸಿದೆ. ಫಿರೋಝಾಬಾದ್ನಲ್ಲಿ ಎಸ್ಪಿಯ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ವಿರುದ್ಧ ಚಂದ್ರ ಸೇನ್ ಜಾಡುನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಶಿವಪಾಲ್ ಸಿಂಗ್ ಇತ್ತೀಚೆಗೆ ಎಸ್ಪಿ ತೊರೆದು ಪ್ರಗತಿಶೀಲ ಸಮಾಜವಾದಿ ಪಕ್ಷ-ಲೋಹಿಯಾ ಸ್ಥಾಪಿಸಿದ್ದರು. ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್ ಅವರು ಕೂಡ ಫಿರೋಝಾಬಾದ್ನಿಂದ ಸ್ಪರ್ಧಿಸಲಿದ್ದಾರೆ.
ಮಚ್ಲಿಶಹರ್ (ಎಸ್ಸಿ) ಕ್ಷೇತ್ರದ ಅಭ್ಯರ್ಥಿಯನ್ನಾಗಿ ಹಾಲಿ ಶಾಸಕ ರಾಮ್ ಚೈತ್ರ ನಿಶಾದ್ ಬದಲಿಗೆ ವಿ.ಪಿ. ಸರೋಜ್ ಅವರನ್ನು ಬಿಜೆಪಿ ಹೆಸರಿಸಿದೆ.