ಎ-ಸ್ಯಾಟ್ನ ಅವಶೇಷಗಳು ಕೆಲವೇ ವಾರಗಳಲ್ಲಿ ನಾಶವಾಗುತ್ತವೆ
ನಾಸಾದ ಕಳವಳಕ್ಕೆ ಡಿಆರ್ಡಿಒ ಉತ್ತರ
ಹೊಸದಿಲ್ಲಿ,ಎ.7: ಭಾರತವು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಅವಶೇಷಗಳಿಂದ ಜಾಗತಿಕ ಬಾಹ್ಯಾಕಾಶ ಆಸ್ತಿಗಳಿಗೆ ಬೆದರಿಕೆಯನ್ನು ನಿವಾರಿಸಲು 'ಮಿಷನ್ ಶಕ್ತಿ' ಸಂದರ್ಭದಲ್ಲಿ 300 ಕಿ.ಮೀ.ಅಂತರದೊಳಗಿನ ಅತ್ಯಂತ ಕೆಳಗಿನ ಕಕ್ಷೆಯನ್ನು ಆಯ್ಕೆ ಮಾಡಿಕೊಂಡಿತ್ತು ಮತ್ತು ಅವಶೇಷಗಳು ಕೆಲವೇ ವಾರಗಳಲ್ಲಿ ನಾಶಗೊಳ್ಳುತ್ತವೆ ಎಂದು ಡಿಆರ್ಡಿಒ ಅಧ್ಯಕ್ಷ ಜಿ.ಸತೀಶ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
ಮಾ.27ರಂದು ಭಾರತವು ನಡೆಸಿದ್ದ ಉಪಗ್ರಹ ನಿಗ್ರಹ ಪರೀಕ್ಷೆ(ಎ-ಸ್ಯಾಟ್)ಯಿಂದಾಗಿ ಬಾಹ್ಯಾಕಾಶದಲ್ಲಿ ಅವಶೇಷಗಳು ಹರಡುವ ಬಗ್ಗೆ ಅಮೆರಿಕದ ನಾಸಾ ಕೆಲವು ದಿನಗಳ ಹಿಂದೆ ಕಳವಳ ವ್ಯಕ್ತಪಡಿಸಿತ್ತು.
ಶನಿವಾರ ಇಲ್ಲಿಯ ಡಿಆರ್ಡಿಒ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ,ಉಪಗ್ರಹ ನಿಗ್ರಹ ಕ್ಷಿಪಣಿಯು 1,000 ಕೀ.ಮೀ.ದೂರದ ಕಕ್ಷೆಯಲ್ಲಿನ ಉಪಗ್ರಹಗಳನ್ನು ಛೇದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.
ಭಾರತವು ತನ್ನ ಉಪಗ್ರಹವೊಂದನ್ನು ನಾಶಗೊಳಿಸಿರುವುದರಿಂದ ಬಾಹ್ಯಾಕಾಶದಲ್ಲಿ ಸುಮಾರು 400 ಅವಶೇಷಗಳು ಸೃಷ್ಟಿಯಾಗಿವೆ ಎಂದು ನಾಸಾ ಮಂಗಳವಾರ ಹೇಳಿತ್ತು.
ಬಾಹ್ಯಾಕಾಶದಲ್ಲಿ ಅವಶೇಷಗಳುಂಟಾಗುವುದನ್ನು ತಪ್ಪಿಸಲು ಪರೀಕ್ಷೆಯನ್ನು ಕೆಳ ವಾತಾವರಣದಲ್ಲಿ ನಡೆಸಲಾಗಿತ್ತು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಹೇಳಿದೆ.