ಸ್ವಚ್ಛತಾ ಕಾರ್ಮಿಕರ ಬೇಡಿಕೆ ಈಡೇರಿಸಲು ಮೋದಿ ವಿಫಲ: ಎಸ್ಕೆಎ
ಮುಂಬೈ, ಎ. 8: ಚರಂಡಿ ಸ್ವಚ್ಛಗೊಳಿಸುವ ಸಂದರ್ಭ ಪ್ರತಿ ವರ್ಷ ಅಸಂಖ್ಯಾತ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪುತ್ತಿದ್ದಾರೆ ಎಂದು ಸಫಾಯಿ ಕರ್ಮಾಚಾರಿ ಆಂದೋಲನದ ಮುಖ್ಯಸ್ಥ ಬೆಜವಾಡ ವಿಲ್ಸನ್ ಹೇಳಿದ್ದಾರೆ. ಮಾನವ ಮಲ ಹೊರುವಿಕೆ, ಸ್ವಚ್ಛತೆ, ಒಣ ಪಾಯಿಖಾನೆಯಿಂದ ಹಾಗೂ ಚರಂಡಿಯಿಂದ ಮಾನವ ಮಲ ಲೇವಾರಿ ಮಾಡುವ ಪದ್ಧತಿ ನಿರ್ಮೂಲನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆಯನ್ನು ಸ್ವಚ್ಛತಾ ಕಾರ್ಮಿಕರು ಗುರುವಾರ ನೆನಪಿಸಿದ್ದಾರೆ.
ಅವರು (ಮೋದಿ) ಕಳೆದ ಐದು ವರ್ಷಗಳಿಂದ ಏನನ್ನೂ ಮಾಡಿಲ್ಲ ಎಂದು ವಿಲ್ಸನ್ ಹೇಳಿದ್ದಾರೆ.
ಮಾನವ ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನು ದೇಶದಲ್ಲಿ ಇದೆ. ಆದರೆ, ಅದು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಮಾನವ ಮಲ ಹೊರುವಿಕೆಯಲ್ಲಿ ಕಾಮಿಕರು 14 ಸಾವಿರದಿಂದ 31 ಸಾವಿರದ ನಡುವೆ ಇದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಸಫಾಯಿ ಕರ್ಮಾಚಾರಿ ಆಂದೋಲನ ಹೇಳಿದೆ.
ಸುಮಾರು 770,000 ಕಾರ್ಮಿಕರು ಮಾನವ ಮಲ ಹೊರುವಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಒಂದು ದಶಕದಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿರುವ ಸಂದರ್ಭ ಸುಮಾರು 1800 ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಎಸ್ಕೆಎ ಹೇಳಿದೆ.