ಪಾಕ್ ವಿರುದ್ಧ ದಾಳಿಗೆ ಸಜ್ಜು: ವದಂತಿ ತಳ್ಳಿಹಾಕಿದ ಭಾರತ
ಇಸ್ಲಾಮಾಬಾದ್, ಎ.8: ಭಾರತ ತನ್ನ ಪಶ್ಚಿಮ ಭಾಗದ ನೆರೆರಾಷ್ಟ್ರದ ಮೇಲೆ ಎಪ್ರಿಲ್ ಮೂರನೇ ವಾರದಲ್ಲಿ ಮತ್ತೊಂದು ದಾಳಿ ನಡೆಸಲು ಸಜ್ಜಾಗಿದೆ ಎಂಬ ಬಗ್ಗೆ "ವಿಶ್ವಾಸಾರ್ಹ ಗುಪ್ತಚರ ಮಾಹಿತಿ" ಇದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ. ಆದರೆ ಭಾರತ ಇದನ್ನು ತಳ್ಳಿಹಾಕಿದ್ದು, "ಇದು ಯುದ್ಧ ಹಿಸ್ಟೀರಿಯಾ ಹರಡುವ ಉದ್ದೇಶದ ಬೇಜವಾಬ್ದಾರಿಯುತ ಮತ್ತು ಅಸಂಬದ್ಧ ಹೇಳಿಕೆ" ಎಂದು ಟೀಕಿಸಿದೆ.
ಮುಲ್ತಾನ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖುರೇಷಿ, "ಪಾಕಿಸ್ತಾನದ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಭಾರತ ಯೋಜನೆ ರೂಪಿಸಿರುವ ಬಗ್ಗೆ ನಮ್ಮ ಬಳಿ ವಿಶ್ವಾಸಾರ್ಹ ಗುಪ್ತಚರ ಮಾಹಿತಿಗಳಿವೆ. ನಮ್ಮ ಮಾಹಿತಿ ಪ್ರಕಾರ, ಎಪ್ರಿಲ್ 16ರಿಂದ 20ರ ನಡುವೆ ಈ ದಾಳಿ ನಡೆಯಲಿದೆ. ಪುಲ್ವಾಮಾ ದಾಳಿಯಂತೆ ಭಾರತದ ಕಾಶ್ಮೀರದಲ್ಲಿ ಇಂಥ ಒಂದು ಘಟನೆಯನ್ನು ಹುಟ್ಟುಹಾಕಲಿದೆ. ಅವರ ಉದ್ದೇಶ, ಪಾಕಿಸ್ತಾನ ವಿರುದ್ಧದ ತಮ್ಮ ಆಕ್ರಮಣವನ್ನು ಸಮರ್ಥಿಸಿಕೊಳ್ಳುವುದು ಹಾಗೂ ಇಸ್ಲಾಮಾಬಾದ್ ವಿರುದ್ಧ ರಾಜತಾಂತ್ರಿಕ ಒತ್ತಡ ಹೆಚ್ಚಿಸುವುದು" ಎಂದು ಅವರು ಆಪಾದಿಸಿದ್ದಾರೆ.
ಆದರೆ ಭಾರತ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಇದು ಈ ಭಾಗದಲ್ಲಿ ಯುದ್ಧಭೀತಿಯನ್ನು ಹರಡುವ ಉದ್ದೇಶದ ಹೇಳಿಕೆ ಎಂದು ಭಾರತ ತಿರುಗೇಟು ನೀಡಿದೆ. "ಈ ಬಹಿರಂಗ ಗಿಮಿಕ್, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಾರತದ ಮೇಲೆ ಉಗ್ರ ದಾಳಿ ನಡೆಸಬೇಕು ಎಂದು ಕರೆ ನೀಡುವ ತಂತ್ರ" ಎಂದು ಅಧಿಕೃತ ವಕ್ತಾರ ವಾಗ್ದಾಳಿ ಮಾಡಿದ್ದಾರೆ.
"ಭಾರತದ ಮೇಲೆ ನಡೆಯುವ ಭಯೋತ್ಪಾದಕ ದಾಳಿಯ ಹೊಣೆಗಾರಿಕೆಯಿಂದ ಪಾಕಿಸ್ತಾನ ತಪ್ಪಿಸಿಕೊಳ್ಳುವಂತಿಲ್ಲ ಎಂದು ಆ ದೇಶಕ್ಕೆ ಸ್ಪಷ್ಟಪಡಿಸಲಾಗಿದೆ. ಅಂಥ ದಾಳಿ ನಡೆಸುವ ಯಾವ ಯತ್ನವೂ ಯಶಸ್ವಿಯಾಗದು. ಪಾಕಿಸ್ತಾನ ಇಂಥ ಹೇಳಿಕೆ ನೀಡುವ ಬದಲಾಗಿ ತನ್ನ ನೆಲದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲಿ" ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.