ಮಹಾತ್ಮ ಗಾಂಧಿಯನ್ನು ಕೊಂದವರು ಸರಕಾರ ನಡೆಸುತ್ತಿದ್ದಾರೆ: ಫಾರೂಕ್ ಅಬ್ದುಲ್ಲಾ
ಶ್ರೀನಗರ್, ಎ.8: ಸರಕಾರ ನಡೆಸುತ್ತಿರುವ ಮಂದಿ ಮಹಾತ್ಮ ಗಾಂಧಿಯ ಹಂತಕರಾಗಿದ್ದಾರೆಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ,
ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, “ಮಹಾತ್ಮ ಗಾಂಧಿಯನ್ನು ಹತ್ಯೆಗೈಯ್ಯಲಾಯಿತು. ಅವರನ್ನು ಹತ್ಯೆಗೈದವರು ಆರೆಸ್ಸೆಸ್ ಮಂದಿ. ಈ ಸಂಘಟನೆಯನ್ನು ಆಗಿನ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ನಿಷೇಧಿಸಿದ್ದರು. ಆರೆಸ್ಸೆಸ್ಸಿಗೆ ಹಿಂದೂ ರಾಷ್ಟ್ರ ಸ್ಥಾಪಿಸುವ ಉದ್ದೇಶವಿತ್ತು ಹಾಗೂ ಅದನ್ನು ಆಗಿನ ನಾಯಕರು ಒಪ್ಪಿರಲಿಲ್ಲ. ಈಗ ಸರಕಾರ ನಡೆಸುತ್ತಿರುವ ಮಂದಿಯೇ ಮಹಾತ್ಮ ಗಾಂಧಿಯನ್ನು ಕೊಂದವರು'' ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದ ಫಾರೂಕ್ ಅಬ್ದುಲ್ಲಾ, “ನೀವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಭರವಸೆ ನೀಡಿದವರು. ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ನೀವೇನು ಮಾಡಿದ್ದೀರಿ?, ಇಲ್ಲಿ ಶಾಂತಿ ಸ್ಥಾಪಿಸಿದ್ದೀರಾ?'' ಎಂದು ಪ್ರಶ್ನಿಸಿದರು.
ಶ್ರೀನಗರ-ಜಮ್ಮು ಹೆದ್ದಾರಿಯನ್ನು ಮುಚ್ಚಿದ್ದಕ್ಕಾಗಿ ಅವರು ಕೇಂದ್ರವನ್ನು ಬಲವಾಗಿ ಟೀಕಿಸಿದರು. “ಅವರು ರಸ್ತೆಯನ್ನು ಮುಚ್ಚಿದ್ದಾರೆ. ಕಾರ್ಗಿಲ್ ಯುದ್ಧ ನಡೆದಾಗಲೂ ಈ ರಸ್ತೆಯನ್ನು ಮುಚ್ಚಲಾಗಿರಲಿಲ್ಲ. ನಾನು ಆಗ ಮುಖ್ಯಮಂತ್ರಿಯಾಗಿದ್ದೆ. ಆಗ ಯಾವ ರಸ್ತೆಯನ್ನೂ ಬಂದ್ ಮಾಡಲಾಗಿರಲಿಲ್ಲ. ಈಗ ಯಾವ ಯುದ್ಧ ನಡೆಯುತ್ತಿದೆ?, ನೀವು ನೀಡಿದ ಭರವಸೆ ಈಡೇರಿಸಿಲ್ಲ'' ಎಂದು ಅಬ್ದುಲ್ಲಾ ಹೇಳಿದರು.