“ಜನರು ಬಾರದ ಕಾರಣ ಅಮಿತ್ ಶಾ ಚುನಾವಣಾ ರ್ಯಾಲಿ ರದ್ದು”
ಮುಂಬೈ, ಎ. 8: ಜನರು ಪಾಲ್ಗೊಳ್ಳದೇ ಇದ್ದುದರಿಂದ ಮಹಾರಾಷ್ಟ್ರದ ಗಡ್ಚಿರೋಳಿ ಹಾಗೂ ಚಂದ್ರಾಪುರ ಜಿಲ್ಲೆಗಳಲ್ಲಿ ರವಿವಾರ ಬಿಜೆಪಿ ವರಿಷ್ಠ ಅಮಿತ್ ಶಾ ಅವರ ಚುನಾವಣಾ ರ್ಯಾಲಿ ರದ್ದುಗೊಳಿಸಲಾಗಿತ್ತು ಎಂದು ಎನ್ಸಿಪಿ ಸೋಮವಾರ ಹೇಳಿದೆ. ಆದರೆ, ಈ ಪ್ರತಿಪಾದನೆ ನಿರಾಕರಿಸಿರುವ ಬಿಜೆಪಿ, ತಾಂತ್ರಿಕ ಕಾರಣಗಳಿಂದ ಅಮಿತ್ ಶಾ ಅವರ ಚುನಾವಣಾ ರ್ಯಾಲಿ ರದ್ದುಪಡಿಸಲಾಗಿತ್ತು ಎಂದು ಪ್ರತಿಪಾದಿಸಿದೆ.
‘‘ಅಮಿತ್ ಶಾ ಅವರ ಗಡ್ಚಿರೋಳಿ ಹಾಗೂ ಚಂದ್ರಾಪುರ ಸಾರ್ವಜನಿಕ ಸಭೆ ರದ್ದುಗೊಳಿಸಲಾಗಿತ್ತು. ಜನರು ಭಾಗವಹಿಸದೇ ಇರುವುದು ಸಾರ್ವಜನಿಕ ಸಭೆ ರದ್ದುಗೊಳಿಸಲು ನಿಜವಾದ ಕಾರಣ’’ ಎಂದು ಎನ್ಸಿಪಿ ರಾಷ್ಟ್ರೀಯ ವಕ್ತಾರ ನವಾಬ್ ಮಲ್ಲಿಕ್ ‘‘23 ಮೇ, ಬಿಜೆಪಿ ಗಾನ್’’ ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ. ‘‘ತಾಂತ್ರಿಕ ಕಾರಣದಿಂದ ಮಾತ್ರ ಶಾ ಅವರ ರ್ಯಾಲಿ ರದ್ದುಗೊಳಿಸಲಾಗಿತ್ತು’’ ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಕೇಶವ್ ಉಪಾದ್ಯಾಯ ಹೇಳಿದ್ದಾರೆ.
Next Story