ದೇವಾಲಯದ ಪ್ರಸಾದ ಸ್ವೀಕರಿಸಿ ಇಬ್ಬರು ಸಾವು: 21 ಮಂದಿ ಅಸ್ವಸ್ಥ
ಜೈಪುರ, ಎ. 8: ಮಧ್ಯಪ್ರದೇಶದ ದೇವಾಲಯವೊಂದರಲ್ಲಿ ವಿಷಪೂರಿತ ಪ್ರಸಾದ ಸೇವಿಸಿ ರಾಜಸ್ಥಾನದ ಬನ್ಸ್ವಾರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 21 ಮಂದಿ ಅಸ್ವಸ್ಥಗೊಂಡಿದ್ದಾರೆ.
ಬನ್ಸ್ವಾರಾ ಪ್ರದೇಶದ ದಾನ್ಪುರ ಗ್ರಾಮದ ಸುಮಾರು 40ರಿಂದ 50 ಜನರು ಸಮೀಪದ ರಾಜ್ಯದ ರತ್ಲಾಂ ಜಿಲ್ಲೆಯ ಸೆರಾ ಗ್ರಾಮದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ್ದರು. ಅವರು ಮನೆಗೆ ಹಿಂದಿರುಗಿದ ಬಳಿಕ ದೇವಾಲಯದಿಂದ ತಂದಿದ್ದ ಪ್ರಸಾದ ಸೇವಿಸಿದ್ದರು ಎಂದು ಡೆಪ್ಯುಟಿ ಚೀಫ್ ಮೆಡಿಕಲ್ ಆಫೀಸರ್ ಹಾಗೂ ಆರೋಗ್ಯಾಧಿಕಾರಿ ರಮೇಶ್ ಚಂದ್ರ ಶರ್ಮಾ ಹೇಳಿದ್ದಾರೆ.
ಅನಂತರ ಕೆಲವರಿಗೆ ವಾಂತಿ ಹಾಗೂ ಬೇಧಿ ಆರಂಭವಾಯಿತು. ತೀವ್ರ ಅಸ್ವಸ್ಥಗೊಂಡ ಬಹುದ್ದೂರ್ (30) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಆಶಾ (25) ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 21 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಲಾಗಿ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ದಾನ್ಪುರ ಪೊಲೀಸ್ ಠಾಣೆ ಉಸ್ತುವಾರಿ ಅಧಿಕಾರಿ ಗಜವೀರ್ ಸಿಂಗ್ ತಿಳಿಸಿದ್ದಾರೆ.