ಕಾರಿನ ದಾಖಲೆ ಪತ್ರ ಕೇಳಿದ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷಗೈದ ಬಿಜೆಪಿ ಶಾಸಕನ ಪುತ್ರ !
ಕಾನ್ಪುರ್ : ನೋಂದಣಿ ಸಂಖ್ಯೆ ರಹಿತ ಕಾರಿನ ದಾಖಲೆಗಳನ್ನು ತೋರಿಸುವಂತೆ ಹೇಳಿದ ಪೊಲೀಸ್ ಅಧಿಕಾರಿಗೆ ಗರೋಥ (ಝಾನ್ಸಿ) ಕ್ಷೇತ್ರದ ಬಿಜೆಪಿ ಶಾಸಕ ಜವಾಹರ್ ರಾಜಪುತ್ ಅವರ ಪುತ್ರ ಕಪಾಳಮೋಕ್ಷಗೈದ ಘಟನೆ ರವಿವಾರ ತಡ ರಾತ್ರಿ ನಡೆದಿದೆ.
ಘಟನೆ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಝಾನ್ಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಒ ಪಿ ಸಿಂಗ್ ಹೇಳಿದ್ದಾರೆ.
ಶಾಸಕನ ಪುತ್ರ ರಾಹುಲ್ ರಾಜಪುತ್ ಎಂಬಾತನನ್ನು ಗುರುಸರೈ ಪ್ರದೇಶದ ಮೋದಿ ಚೌರಾಹ ಎಂಬಲ್ಲಿ ತಪಾಸಣೆಗಾಗಿ ನಿಲ್ಲಿಸಿದ್ದ ಸಂದರ್ಭ ಘಟನೆ ನಡೆದಿತ್ತು. ರಾಹುಲ್ ರಾಜಪುತ್ ಕಾರಿಗೆ ನಂಬರ್ ಪ್ಲೇಟ್ ಇರದೇ ಇದ್ದುದನ್ನು ಗಮಿನಿಸಿದ ಪೊಲೀಸ್ ಅಧಿಕಾರಿ ದಾಖಲೆ ತೋರಿಸುವಂತೆ ಹೇಳಿದಾಗ ಆತ ಸಿಟ್ಟುಗೊಂಡಿದ್ದು ಅಲ್ಲದೆ ತಾನು ಶಾಸಕರ ಪುತ್ರ ಹಾಗೂ ತನ್ನ ದಾಖಲೆ ಪತ್ರ ಕೇಳಿದ್ದಕ್ಕೆ ತುಂಬಾ ಬೆಲೆ ತೆರಬೇಕಾದೀತೆಂದು ಬೆದರಿಸಿದ್ದನೆನ್ನಲಾಗಿದೆ. ಆದರೆ ಆತನ ಬೆದರಿಕೆಗೆ ಅಧಿಕಾರಿ ಬಗ್ಗದೇ ಇದ್ದಾಗ ಅವರಿಗೆ ಆತ ಕಪಾಳಮೋಕ್ಷಗೈದಿದ್ದ. ನಂತರ ರಾಹುಲ್ ರಾಜಪುತ್ ನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು.
ಘಟನೆ ಬಗ್ಗೆ ತಿಳಿದ ಶಾಸಕ ತನ್ನ ಬೆಂಬಲಿಗರೊಂದಿಗೆ ಅಲ್ಲಿಗೆ ಆಗಮಿಸಿ ಧರಣಿ ಕುಳಿತ ಘಟನೆಯೂ ನಡೆದಿತ್ತು. ಪೊಲೀಸರು ತಮ್ಮ ಪುತ್ರನಿಗೆ ಥಳಿಸಿ ದ್ದಾರೆಂಬ ಆರೋಪ ಕೂಡ ಶಾಸಕನಿಂದ ಕೇಳಿ ಬಂತಲ್ಲದೆ ತನ್ನ ಪುತ್ರನಿಗೆ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಒತ್ತಾಯಿಸಿದ್ದಾರೆ.
ಶಾಸಕನ ಜತೆ ಪೊಲೀಸರು ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ ಆರೋಪಿಯನ್ನು ಬಿಡುಗಡೆಗೊಳಿಸಲಾಯಿತು. ಘಟನೆಯ ವೀಡಿಯೊ ದೃಶ್ಯಾವಳಿಯ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.