ಮಾಯಾವತಿ ಮುಳುಗುತ್ತಿರುವ ಹಡಗು: ಪ್ರಧಾನಿ ಮೋದಿ ವ್ಯಂಗ್ಯ
ಹೊಸದಿಲ್ಲಿ, ಎ.9: ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಮುಳುಗುತ್ತಿರುವ ಹಡಗು. ತಾನು ಮುಳುಗುವುದರಿಂದ ಬಚಾವಾಗಲು ಮುಸ್ಲಿಮರತ್ತ ಕೈ ಚಾಚಿದ್ದಾರೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರು ವ್ಯಂಗ್ಯವಾಡಿದ್ದಾರೆ.
"ಮಾಯಾವತಿ ಅವರ ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇನೆ. ಸೋಲಿನ ಭೀತಿಯಲ್ಲಿರುವ ಅವರು ಗೆಲ್ಲಲು ಹವಣಿಸುತ್ತಿದ್ದಾರೆ. ಇತ್ತೀಚೆಗೆ ಎಸ್ಪಿ-ಬಿಎಸ್ಪಿ ಜಂಟಿ ಚುನಾವಣಾ ರ್ಯಾಲಿಯಲ್ಲಿ ಮಾಯಾವತಿ ಕಾಂಗ್ರೆಸ್ಗೆ ಮುಸ್ಲಿಮರು ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ಗೆ ಮತ ಹಾಕುವ ಮೂಲಕ ಬಿಜೆಪಿಗೆ ಅವಕಾಶ ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಆಯೋಗ ಬಿಎಸ್ಪಿ ಮುಖ್ಯಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು, ಅವರ ಹೇಳಿಕೆ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಬೇಕಾಗಿರುವ ವರದಿಗಾಗಿ ಕಾಯುತ್ತಿದೆ'' ಎಂದರು.
"ಬಿಎಸ್ಪಿ ನಾಯಕಿಯನ್ನು ಪ್ರಶ್ನಿಸುವ ಮೊದಲು ಪ್ರಧಾನಿ ತಮ್ಮ ಪಕ್ಷವನ್ನು ನೋಡಿಕೊಳ್ಳಲಿ. ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಬಿಜೆಪಿ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು''ಎಂದು ಬಿಎಸ್ಪಿ ವಕ್ತಾರ ಸುಧೀಂದ್ರ ಬಂಡೋರ ಪ್ರತಿಕ್ರಿಯೆ ನೀಡಿದ್ದಾರೆ.