ದಿಲ್ಲಿಯ 7 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ: ಕಾಂಗ್ರೆಸ್
ಹೊಸದಿಲ್ಲಿ, ಎ. 12: ಮೈತ್ರಿ ಅಂತಿಮಗೊಳಿಸದೇ ಇರುವುದಕ್ಕೆ ದಿಲ್ಲಿ ಕಾಂಗ್ರೆಸ್ ಘಟಕದ ಉಸ್ತುವಾರಿ ಪಿ.ಸಿ. ಚಾಕೊ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಗೆ ಮೂರು ಸ್ಥಾನ ಹಾಗೂ ಆಪ್ ನಾಲ್ಕು ಸ್ಥಾನ ಹಂಚಿಕೆಗೆ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಇಂದು ಕೂಡ ಸಿದ್ಧರಿದ್ದೇವೆ ಎಂದು ಚಾಕೊ ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಪ್ ಅನ್ನು ಪ್ರತಿನಿಧಿಸಿದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ತಮ್ಮ ಮತ ಹಂಚಿಕೆಯ ಆಧಾರದಲ್ಲಿ ಎರಡೂ ಪಕ್ಷಗಳು ಒಪ್ಪಂದಕ್ಕೆ ಬಂದಿವೆ ಎಂದು ಅವರು ಹೇಳಿದರು. ‘‘ದಿಲ್ಲಿಯಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 21 ಮತ ಗಳಿಸಿದೆ. ಆಪ್ ಶೇ. 26 ಮತ ಗಳಿಸಿದೆ. ಎರಡೂ ಪಕ್ಷಗಳು ಒಟ್ಟಾಗಿ ಸೇ. 47 ಮತಗಳನ್ನು ಪಡೆಯಲಿವೆ. ಇದರ ಆಧಾರದ ಮೇಲೆ ದಿಲ್ಲಿಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಆಪ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಸಂಜಯ್ ಸಿಂಗ್ ಅವರೊಂದಿಗಿನ ಮಾತುಕತೆ ಸಂದರ್ಭ ಒಪ್ಪಂದಕ್ಕೆ ಬರಲಾಗಿತ್ತು’’ ಎಂದು ಅವರು ಹೇಳಿದ್ದಾರೆ. ಆಪ್ ತನ್ನ ಬೇಡಿಕೆಯನ್ನು ಬದಲಾಯಿಸಿದೆ ಹಾಗೂ ಪಂಜಾಬ್ನಲ್ಲಿ ಹಾಗೂ ಹರ್ಯಾಣದಲ್ಲಿ ಕೂಡ ಮೈತ್ರಿ ಮಾಡಿಕೊಳ್ಳುವುದಾಗಿ ಸೂಚಿಸಿದೆ.
ಆದರೆ, ಅಲ್ಲಿನ ಕ್ಷೇತ್ರಗಳಲ್ಲಿ ರಾಜಕೀಯ ಪರಿಸ್ಥಿತಿ ಬೇರೆ ಇರುವುದರಿಂದ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಒಪ್ಪಿಕೊಂಡಿಲ್ಲ ಎಂದು ಚಾಕೊ ಹೇಳಿದರು. ಒಪ್ಪಂದಕ್ಕೆ ಬರಲು ಕಾಂಗ್ರೆಸ್ ಸಿದ್ಧವಿಲ್ಲಂದು ಆಪ್ ಮೊನ್ನೆ ಹೇಳಿಕೆ ನೀಡಿತ್ತು. ಇದು ಸತ್ಯವವಲ್ಲ. ಆಪ್ ತನ್ನ ನಿಲುವಿನಿಂದ ಹಿಂದೆ ಸರಿದರೆ, ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆೆ ಎಂದು ಅವರು ಹೇಳಿದ್ದಾರೆ.