ನೆಹರೂ, ಇಂದಿರಾ ನಿಂದಿಸುತ್ತಲೇ ನೀವು ಅವರನ್ನು ಅನುಕರಿಸುತ್ತಿದ್ದೀರಿ: ಮೋದಿಗೆ ರಾಜ್ಠಾಕ್ರೆ ಮಾತಿನ ಚಾಟಿ
ಹೊಸದಿಲ್ಲಿ, ಎ.13: ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಪ್ರಧಾನಿ ಮೋದಿ ಬಗೆಗಿನ ಅವರ ಟೀಕೆ ಎಂದಿನಂತೆಯೇ ಮುಂದುವರಿದಿದೆ. "ಇಂದಿರಾ ಗಾಂಧಿ ಹಾಗೂ ನೆಹರೂ ಅವರನ್ನು ಟೀಕಿಸುತ್ತಲೇ ಅವರನ್ನು ಮೋದಿ ಅನುಕರಿಸುತ್ತಿದ್ದಾರೆ" ಎಂದು ಮೋದಿ ವಿರುದ್ಧ ಠಾಕ್ರೆ ಮಾತಿನ ಚಾಟಿ ಬೀಸಿದ್ದಾರೆ.
"ತೀನ್ಮೂರ್ತಿ ಭವನದಲ್ಲಿರುವ ನೆಹರೂ ಸ್ಮಾರಕ ಮ್ಯೂಸಿಯಂನಲ್ಲಿ ನೆಹರೂ ಅವರ ಹೇಳಿಕೆಯೊಂದು ಗಮನ ಸೆಳೆಯುತ್ತದೆ, ’ಇಸ್ ದೇಶ್ ಕಿ ಜನತ ಹಮೇ ಪ್ರಧಾನ ಮಂತ್ರಿ ನಾ ಕಹೇ, ಪ್ರಥಮ್ ಸೇವಕ್ ಕಹೇ (ಈ ದೇಶದ ಜನ ನನ್ನನ್ನು ಪ್ರಧಾನಿ ಎಂದು ಕರೆಯಬಾರದು; ಪ್ರಥಮ ಸೇವಕ ಎಂದು ಕರೆಯಬೇಕು’ ಆದರೆ ಮೋದಿ ಕೇವಲ ಪ್ರಥಮ್ ಸೇವಕ ಎಂಬ ಪದವನ್ನು ಪ್ರಧಾನ ಸೇವಕ ಎಂದಷ್ಟೇ ಬದಲಿಸಿದ್ದಾರೆ ಎಂದು ಠಾಕ್ರೆ ಚುನಾವಣಾ ರ್ಯಾಲಿಯಲ್ಲಿ ವ್ಯಂಗ್ಯವಾಡಿದರು. ಮೋದಿ ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಂಡಿದ್ದಾರೆ.
"ನೀವು ನೆಹರೂ ಹಾಗೂ ಇಂದಿರಾ ಗಾಂಧಿಯವರನ್ನು ತೆಗಳುತ್ತಲೇ ಇದ್ದೀರಿ..ಮತ್ತೆ ಅವರನ್ನೇ ಅನುಕರಿಸುತ್ತಿದ್ದೀರಿ.. ಕಳೆದ ಐದು ವರ್ಷಗಳಲ್ಲಿ ನೀವು ಪ್ರತಿಯೊಂದು ವಿಚಾರದ ಬಗ್ಗೆಯೂ ಸುಳ್ಳು ಹೇಳಿದ್ದಷ್ಟೇ ನಿಮ್ಮ ಸಾಧನೆ" ಎಂದು ಟೀಕಿಸಿದರು.