ರಾಹುಲ್ ವಿರುದ್ಧ ಅಶ್ಲೀಲ ಪದ ಬಳಕೆ: ಹಿಮಾಚಲ ಬಿಜೆಪಿ ಅಧ್ಯಕ್ಷರ ಕ್ಷಮೆ ಯಾಚನೆಗೆ ಕಾಂಗ್ರೆಸ್ ಆಗ್ರಹ
ಶಿಮ್ಲ, ಎ.15: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಅಶ್ಲೀಲ ಪದ ಬಳಸಿ ಅವಹೇಳನಾತ್ಮಕ ಹೇಳಿಕೆ ನೀಡಿರುವ ಹಿಮಾಚಲಪ್ರದೇಶ ಬಿಜೆಪಿ ಅಧ್ಯಕ್ಷ ಸತ್ಪಾಲ್ ಸಿಂಗ್ ಸತ್ತಿ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಾಹುಲ್ ಗಾಂಧಿ, ಅವರ ತಾಯಿ, ಬಾವ ಹೀಗೆ ಇಡೀ ಕುಟುಂಬ ಈಗ ಜಾಮೀನಿನ ಮೇಲೆ ಹೊರಬಂದಿದೆ. ಆದರೆ ಮೋದಿಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಅವರು ಜಾಮೀನಿನ ಮೊರೆ ಹೋಗಿಲ್ಲ. ಹೀಗಿರುವಾಗ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಕಳ್ಳ ಎಂದು ಕರೆಯಬಾರದು . ಅವರೇನು ನ್ಯಾಯಾಧೀಶರೇ ಎಂದು ಪ್ರಶ್ನಿಸಿದ ಸಿಂಗ್, ಪಂಜಾಬ್ನ ಪ್ರಜೆಯೊಬ್ಬ ತನಗೆ ತಿಳಿಸಿದ ಮಾತನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ ಎಂದು ತಿಳಿಸಿ ರಾಹುಲ್ ಬಗ್ಗೆ ಅಸಭ್ಯ, ಅಶ್ಲೀಲ ಪದ ಬಳಸಿದ್ದಾರೆ.
ಈ ಹೇಳಿಕೆಯ ಬಗ್ಗೆ ಆಕ್ರೋಶಗೊಂಡ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನರೇಶ್ ಚೌಹಾಣ್, ಕಳೆದ ಐದು ವರ್ಷದಲ್ಲಿ ಬಿಜೆಪಿ ಸರಕಾರ ದಯನೀಯ ವೈಫಲ್ಯ ಕಂಡಿದ್ದು ಈ ಹತಾಶೆಯಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ. ಮುಖಂಡರ ಬಗ್ಗೆ ಈ ರೀತಿಯ ಅಸಭ್ಯ ಹೇಳಿಕೆ ನೀಡುವುದು ಖಂಡನೀಯವಾಗಿದ್ದು ಸತ್ತಿ ಮತ್ತು ಬಿಜೆಪಿ ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.