75 ಲಕ್ಷ ರೂ. ನೀಡಿ, ಇಲ್ಲವೇ ಕಿಡ್ನಿ ಮಾರಲು ಅನುಮತಿಸಿ: ಚು. ಆಯೋಗಕ್ಕೆ ಅಭ್ಯರ್ಥಿಯ ಮನವಿ
ಭೋಪಾಲ್, ಎ.16: ತನಗೆ 75 ಲಕ್ಷ ರೂ. ನೀಡಬೇಕು. ಇಲ್ಲವೇ ಚುನಾವಣೆ ಸ್ಪರ್ಧಿಸಲು ತಮ್ಮ ಕಿಡ್ನಿ ಮಾರಾಟ ಮಾಡಲು ಅನುಮತಿಸಬೇಕೆಂಬ ವಿಚಿತ್ರ ಮನವಿಯನ್ನು ಬಾಲಘಾಟ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್ರೈಟ್ ಮನವಿ ಮಾಡಿದ್ದಾರೆ.
“ಚುನಾವಣಾ ಆಯೋಗವು ಚುನಾವಣಾ ವೆಚ್ಚ ಮಿತಿಯನ್ನು 75 ಲಕ್ಷ ರೂ.ಗೆ ನಿಗದಿಪಡಿಸಿದೆ. ನನ್ನಲ್ಲಿ ಅಷ್ಟೊಂದು ಹಣವಿಲ್ಲ. ನನಗೆ 75 ಲಕ್ಷ ರೂ. ನೀಡಬೇಕು ಇಲ್ಲವೇ ಯಾವುದಾದರೂ ಬ್ಯಾಂಕಿನಿಂದ ನನಗೆ ಸಾಲ ದೊರಕಿಸಿ ಕೊಡಬೇಕು. ಅದು ಸಾಧ್ಯವಾಗದೇ ಇದ್ದರೆ ನನ್ನ ಒಂದು ಕಿಡ್ನಿ ಮಾರಾಟಕ್ಕೆ ಅನುಮತಿಸಬೇಕು'' ಎಂದು ಜಿಲ್ಲಾ ಚುನಾವಣಾಧಿಕಾರಿ ದೀಪಕ್ ಆರ್ಯಾ ಅವರಿಗೆ ಬರೆದ ಪತ್ರದಲ್ಲಿ ಕಿಶೋರ್ ಹೇಳಿದ್ದಾರೆ.
“ಪ್ರಚಾರಕ್ಕೆ ಇನ್ನು ಕೇವಲ 15 ದಿನಗಳು ಬಾಕಿಯಿವೆ. ಅಷ್ಟೊಂದು ಹಣವನ್ನು ಇಷ್ಟು ಕಡಿಮೆ ಅವಧಿಯಲ್ಲಿ ಸಂಗ್ರಹಿಸಲು ನನಗೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದೇನೆ. ನನ್ನ ವಿರುದ್ಧ ಸ್ಪರ್ಧಿಸುವವರೆಲ್ಲರೂ ಭ್ರಷ್ಟರು. ಅವರು ಸ್ಥಳೀಯರಿಂದ ಹಣ ವಸೂಲಿ ಮಾಡಿದ್ದಾರೆ. ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಬಡವರ ಉದ್ಧಾರ ಮಾಡಲು ನಾನು ಬಯಸಿದ್ದೇನೆ'' ಎಂದು ಅವರು ಹೇಳಿಕೊಂಡಿದ್ದಾರೆ.
ಅವರು ಈ ಹಿಂದೆ ಲಂಜಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.