ತನಿಖೆ ಕುರಿತು ಹೊಸದಾಗಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ನಿರ್ದೇಶ
2017ರ ಎಸ್ಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ)
ಹೊಸದಿಲ್ಲಿ,ಎ.16: ಸಿಬ್ಬಂದಿ ಆಯ್ಕೆ ಆಯೋಗ(ಎಸ್ಎಸ್ಸಿ)ದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಕುರಿತು ಹೊಸದಾಗಿ ಸ್ಥಿತಿಗತಿ ವರದಿಯನ್ನು ಎ.23ರೊಳಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಸಿಬಿಐಗೆ ನಿರ್ದೇಶ ನೀಡಿದೆ. 2007ರಲ್ಲಿ ಈ ಸೋರಿಕೆ ನಡೆದಿತ್ತು.
ಎಸ್ಎಸ್ಸಿ ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್(ಸಿಜಿಎಲ್) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸದ್ರಿ ಪ್ರಶ್ನೆಪತ್ರಿಕೆಯ ರದ್ದತಿ ಕುರಿತು ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು ಮುಂದಿನ ವಿಚಾರಣೆಯನ್ನು ಎ.೨೪ಕ್ಕೆ ನಿಗದಿಗೊಳಿಸಿತು.
ಪ್ರಕರಣದ ತನಿಖೆಯ ಸ್ಥಿತಿಗತಿ ಕುರಿತು ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಹಿಂದಿನ ವಿಚಾರಣೆಯ ಸಂದರ್ಭ ಸಿಬಿಐಗೆ ಸೂಚಿಸಿತ್ತು ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ ಭೂಷಣ ಅವರು ಪೀಠಕ್ಕೆ ತಿಳಿಸಿದಾಗ,ತಾನು ಈ ಹಿಂದೆ ಈ ವಿಷಯದಲ್ಲಿ ಮೂರು ಬಾರಿ ಸ್ಥಿತಿಗತಿ ವರದಿಯನ್ನು ಸಲ್ಲಿಸಿದ್ದೇನೆ ಎಂದು ಸಿಬಿಐ ಪ್ರತಿಕ್ರಿಯಿಸಿತು.
ಆದರೆ ಪೀಠವು,ಹೊಸದಾಗಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಮತ್ತು ಅರ್ಜಿದಾರರ ಪರ ವಕೀಲರಿಗೆ ಅದರ ಪ್ರತಿಯನ್ನು ಒದಗಿಸುವಂತೆ ಸಿಬಿಐಗೆ ನಿರ್ದೇಶ ನೀಡಿತು.
ಕಳೆದ ವರ್ಷ ನಡೆದಿದ್ದ ೨೦೧೭ರ ಎಸ್ಎಸ್ಸಿ ಸಿಜಿಎಲ್ ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲು ಎ.೧ರಂದು ಸರ್ವೋಚ್ಚ ನ್ಯಾಯಾಲಯವು ಎಸ್ಎಸ್ಸಿಗೆ ಅನುಮತಿನೀಡಿತ್ತು. ಸರಕಾರಿ ಸಂಸ್ಥೆಗಳು ನ್ಯಾಯಯುತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಸುಧಾರಣೆಗಳನ್ನು ಸೂಚಿಸಲು ಉನ್ನತಾಧಿಕಾರ ಸಮಿತಿಯೊಂದನ್ನೂ ಅದು ನೇಮಿಸಿತ್ತು.