ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧಿಸುತ್ತಾರೆಯೇ?: ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ
ಹೊಸದಿಲ್ಲಿ, ಎ. 18: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಬಗ್ಗೆ ಸ್ಪಷ್ಟತೆ ನೀಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಈ ವಿಷಯದ ಬಗ್ಗೆ ತಾನು ಏನನ್ನೂ ದೃಢಪಡಿಸಲಾರೆ ಅಥವಾ ನಿರಾಕರಿಸಲಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಸಾಧ್ಯತೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾನು ನಿಮ್ಮನ್ನು ನಿಗೂಢತೆಯಲ್ಲಿ ಇರಿಸಲಿದ್ದೇನೆ. ನಿಗೂಢತೆ ಕೆಟ್ಟ ವಿಚಾರವಲ್ಲ’’ ಎಂದರು. ಮೇ 19ರಂದು ನಡೆಯಲಿರುವ ಅಂತಿಮ ಹಂತದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕೂಡ ಸೇರಿದೆ. ಆದರೆ, ಕಾಂಗ್ರೆಸ್ ಇದುವರೆಗೆ ವಾರಣಾಸಿ ಅಭ್ಯರ್ಥಿಯ ಹೆಸರು ಪ್ರಕಟಿಸಿಲ್ಲ. ಬಿಜೆಪಿ ಈಗಾಗಲೇ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜನವರಿಯಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಅವರಿಗೆ ಉತ್ತರಪ್ರದೇಶ ಪೂರ್ವ ವಲಯದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಈ ವಲಯದಲ್ಲೇ ವಾರಣಾಸಿ ಇದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹರಡಿತ್ತು. ಕಳೆದ ತಿಂಗಳು ಪಕ್ಷದ ಕಾರ್ಯಕರ್ತರೊಬ್ಬರು ರಾಯ್ ಬರೇಲಿಯಿಂದ ಸ್ಪರ್ಧಿಸಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕೇಳಿಕೊಂಡಿದ್ದರು. ಅದಕ್ಕೆ ಅವರು, “ನಾನು ವಾರಣಾಸಿಯಿಂದ ಸ್ಪರ್ಧಿಸಬೇಡವೇ ?” ಎಂದು ಪ್ರಶ್ನಿಸಿದ್ದರು.