ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆ: ಕೊಲೆ ಆರೋಪ
ಕೋಲ್ಕತಾ, ಎ.18: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಂಬಂಧಿ ಹಿಂಸಾಚಾರದ ಮಧ್ಯೆಯೇ, ಸೇನಾಬನ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಟಿಎಂಸಿಯ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಯುವಮೋರ್ಛಾದ ಕಾರ್ಯಕರ್ತ, 22 ವರ್ಷದ ಶಿಶುಪಾಲ ಸಾಹಿಸ್ ಎಂಬಾತನ ಮೃತದೇಹ ಗುರುವಾರ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿಶುಪಾಲ ಸಾಹಿಸ್ನ ತಂದೆ ಬಿಜೆಪಿ ಅಧಿಕಾರದಲ್ಲಿರುವ ಶಿರ್ಕಾಬಾದ್ ಗ್ರಾಮಪಂಚಾಯತ್ನ ಉಪಾಧ್ಯಕ್ಷರಾಗಿದ್ದಾರೆ. ಶಿಶುಪಾಲನನ್ನು ಟಿಎಂಸಿಯ ಗೂಂಡಾಗಳು ಹತ್ಯೆಗೈದು ನೇಣು ಹಾಕಿದ್ದಾರೆ. ಕಳೆದ ವರ್ಷ ನಡೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲೂ ನಮ್ಮ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿತ್ತು. ಈಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದು ಮರುಕಳಿಸಿದೆ. ಆಡಳಿತಾರೂಢ ಟಿಎಂಸಿ ಪಕ್ಷದ ಗೂಂಡಾಗಳ ಕೃತ್ಯ ಇದಾಗಿದೆ ಎಂದು ಬಿಜೆಪಿಯ ಪುರೂಲಿಯಾ ಘಟಕ ಸಮಿತಿ ಆರೋಪಿಸಿದೆ.
ಇದನ್ನು ಟಿಎಂಸಿ ನಿರಾಕರಿಸಿದ್ದು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸಾವಿನ ರಾಜಕೀಯ ಮಾಡಲು ಮುಂದಾಗಿದೆ ಎಂದು ಟೀಕಿಸಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವಿನ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.