ಮೋದಿ ಆರೆಸ್ಸೆಸ್ ಪ್ರಚಾರಕರಂತೆ ವರ್ತಿಸಬಾರದು: ಪಿಣರಾಯಿ ವಿಜಯನ್
ತಿರುವನಂತಪುರ, ಎ. 19: ನರೇಂದ್ರ ಮೋದಿಯವರು ಕೇವಲ ಆರೆಸ್ಸೆಸ್ ಪ್ರಚಾರಕರಂತೆ ವರ್ತಿಸಬಾರದು ಮತ್ತು ಪ್ರಧಾನಿಯಾಗಿದ್ದುಕೊಂಡು ಶುದ್ಧ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ಮೋದಿ ಶಬರಿಮಲೆ ಘಟನೆ ಬಗ್ಗೆ ಪರೋಕ್ಷವಾಗಿ ಮಾತ್ರ ಉಲ್ಲೇಖಿಸಿದ್ದಾರೆ. ಏಕೆಂದರೆ ವಾಸ್ತವದ ಅರಿವು ಇರುವ ಮಲೆಯಾಳಿಗಳ ಎದುರು ಅವರು ಘನತೆ ಕಳೆದುಕೊಳ್ಳಲಾರರು. ಅವರು ದೇಶದ ಪ್ರಧಾನಿ ಹಾಗೂ ವಾಸ್ತವಾಂಶಗಳನ್ನಷ್ಟೇ ಮಾತನಾಡಬೇಕು. ಚುನಾವಣಾ ರ್ಯಾಲಿಗಳಲ್ಲಿ ಮಾತನಾಡುವಾಗ ಅವರು, ಹಿಂದಿನ ಆರೆಸ್ಸೆಸ್ ಪ್ರಚಾರಕ ಅವತಾರ ತಾಳಬಾರದು. ಪ್ರಧಾನಿಯಿಂದ ಸುಳ್ಳಿನ ಕಂತೆಗಳನ್ನು ಯಾರೂ ನಿರೀಕ್ಷಿಸಲಾರರು. ಶಬರಿಮಲೆ ವಿಚಾರದಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಿದ, ಭಕ್ತರನ್ನು ಬಂಧಿಸಿದ ಮತ್ತು ಸನ್ನಿಧಾನದದಲ್ಲಿ ತೊಂದರೆ ಉಂಟು ಮಾಡಿದ ಅಪರಾಧ ಕೃತ್ಯಗಳ ವಿರುದ್ಧ ಕ್ರಮ ಕೈಗೊಂಡಿರುವುದು ನಿಜ. ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ತಪ್ಪು ಮಾಹಿತಿ ಹರಡುವ ಬದಲು ಮೋದಿ ಅದನ್ನು ಸ್ವಾಗತಿಸಿಬೇಕಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಬರಿಮಲೆ ವಿವಾದದ ಹಿನ್ನೆಲೆಯಲ್ಲಿ ತಿರುವನಂತಪುರ ಅಥವಾ ಪಟ್ಟಣಂತಿಟ್ಟ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ, "ಬಿಜೆಪಿ ರಾಜ್ಯದಲ್ಲಿ ಖಾತೆ ತೆರೆಯುವ ಸಾಧ್ಯತೆಯೇ ಇಲ್ಲ. ತಿರುವನಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುಮ್ಮನಮ್ ಮೂರನೇ ಸ್ಥಾನ ಗಳಿಸಲಿದ್ದಾರೆ. ಪಟ್ಟಣಂತಿಟ್ಟದಲ್ಲಿ ಸ್ಪರ್ಧೆ ಇರುವುದು ಯುಡಿಎಫ್ ಹಾಗೂ ಎಲ್ಡಿಎಫ್ ನಡುವೆ ಎಂದು ಉತ್ತರಿಸಿದರು.
ರಾಹುಲ್ಗಾಂಧಿ ಸ್ಪರ್ಧೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪರ ಒಗ್ಗೂಡುವ ಸಾಧ್ಯತೆಯನ್ನು ಕೂಡಾ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.