ಪ್ರಧಾನಿಯನ್ನು ಬದಲಿಸಲು ಉ.ಪ್ರದೇಶದ ಜನರು ಸಿದ್ಧರಾಗಿದ್ದಾರೆ: ಮಾಯಾವತಿ
ಲಕ್ನೋ,ಎ.21: ನರೇಂದ್ರ ಮೋದಿಯವರು ಪ್ರಧಾನಿಯಾಗಲು ನೆರವಾಗಿದ್ದ ಉತ್ತರ ಪ್ರದೇಶದ ಜನರು ಈ ಬಾರಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರನ್ನು ಹುದ್ದೆಯಿಂದ ಕಿತ್ತೊಗೆಯಲು ಸಿದ್ಧರಾಗಿದ್ದಾರೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ರವಿವಾರ ಇಲ್ಲಿ ಹೇಳಿದರು.
ಮೋದಿ ಉ.ಪ್ರದೇಶದ 22 ಕೋಟಿ ಜನರು ತನ್ನನ್ನು ಪ್ರಧಾನಿಯನ್ನಾಗಿ ಮಾಡಿದ್ದರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ,ಆದರೆ ತಮ್ಮನ್ನುವಂಚಿಸಿದ್ದೇಕೆ ಎಂದು ಜನರು ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದರು.
ಉತ್ತರ ಪ್ರದೇಶದ ಸಾಮಾನ್ಯ ಜನರೂ ತಮ್ಮನ್ನು ಅಧಿಕಾರದಿಂದ ಕಿತ್ತೊಗೆಯಬಲ್ಲರು ಮತ್ತು ಅದಕ್ಕಾಗಿ ಸಿದ್ಧತೆಯು ಆರಂಭಗೊಂಡಿದೆ ಎನ್ನುವುದನ್ನುಬಿಜೆಪಿ, ವಿಶೇಷವಾಗಿ ಮೋದಿ ತಿಳಿದುಕೊಳ್ಳಬೇಕು ಎಂದು ಹೇಳಿದ ಮಾಯಾವತಿ, ಮೋದಿಯವರು ರಾಜಕೀಯ ಮತ್ತು ಚುನಾವಣಾ ಲಾಭಗಳಿಗಾಗಿ ತನ್ನಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಎಸ್ಪಿಎಸ್ಪಿ ಆರ್ಎಲ್ಡಿ ಕೂಟವು ರಾಜ್ಯದ 22 ಕೋಟಿ ಜನರ ‘ಮನ್ ಕಿ ಬಾತ್’ ಅನ್ನು ಆಲಿಸಿ ಮೈತ್ರಿಯನ್ನು ಮಾಡಿಕೊಂಡಿದ್ದು,ಇದು ದೇಶಾದ್ಯಂತ ಜನರಿಗೆ ಸಂತಸವನ್ನುಂಟು ಮಾಡಿದೆ ಎಂದ ಅವರು,ಅಧಿಕಾರವನ್ನು ಕಳೆದುಕೊಳ್ಳುವ ಬಿಜೆಪಿಯ ಹತಾಶೆ ಮತ್ತು ಭೀತಿ ಅತ್ಯಂತ ಸ್ಫುಟವಾಗಿದೆ ಮತ್ತುದೇಶದ ಜನರು ಇದನ್ನು ಕಾಣಬಹುದಾಗಿದೆ ಎಂದರು.