ಮುಸ್ಲಿಮರು ನನಗೆ ಮತ ಹಾಕದೇ ಇದ್ದರೆ ಏನೂ ಸಮಸ್ಯೆಯಾಗದು: ವರುಣ್ ಗಾಂಧಿ
ಪಿಲಿಭಿಟ್, ಎ.22: ಒಂದು ವೇಳೆ ಮುಸ್ಲಿಮರು ನನಗೆ ಮತ ಹಾಕದೇ ಇದ್ದರೆ ಏನೂ ಸಮಸ್ಯೆಯಾಗದು ಎಂದು ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಹೇಳಿದ್ದಾರೆ.
‘‘ನನ್ನ ಮುಸ್ಲಿಮ್ ಸಹೋದರರಿಗೆ ಒಂದು ಮಾತು ಹೇಳಲು ಬಯಸುವೆ. ನೀವು ನನಗೆ ಮತ ಹಾಕಿದರೆ ತುಂಬಾ ಸಂತೋಷ. ಒಂದು ವೇಳೆ ಮತ ಹಾಕದೇ ಇದ್ದರೆ ಯಾವುದೇ ಸಮಸ್ಯೆಯಿಲ್ಲ. ಮತ ಹಾಕದಿದ್ದರೂ ನೀವು ನನ್ನ ಬಳಿ ಬಂದು ನಿಮ್ಮ ಕೆಲಸ ಮಾಡಿಸಿಕೊಳ್ಳಬಹುದು. ನಿಮ್ಮ ಸಕ್ಕರೆ ನನ್ನ ಚಹಾಕ್ಕೆ ಮಿಶ್ರಣವಾದರೆ ಚಹಾ ತುಂಬಾ ಸಿಹಿಯಾಗಿರುತ್ತದೆ’’ ಎಂದರು.
ವರುಣ್ ಗಾಂಧಿ ಅವರ ಈ ಹೇಳಿಕೆಯು ಕೆಲವೇ ದಿನಗಳ ಹಿಂದೆ ಅವರ ತಾಯಿ, ಕೇಂದ್ರ ಸಚಿವೆ ಮೇನಕಾ ಗಾಂಧಿ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿದೆ.
ಎ.12 ರಂದು ತಾನು ಸ್ಪರ್ಧಿಸುತ್ತಿರುವ ಸುಲ್ತಾನ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡುತ್ತಿದ್ದ ಮೇನಕಾ ಗಾಂಧಿ, ಮುಸ್ಲಿಮರ ಬೆಂಬಲ ಇದ್ದರೂ, ಇಲ್ಲದಿದ್ದರೂ ನಾನು ಸುಲ್ತಾನ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬಂದರೆ ಅವರ ಕೆಲಸವಾಗಲು ನಮ್ಮ ಅಗತ್ಯವಿದೆ ಎಂದು ಆ ಸಮುದಾಯ ಅರಿತುಕೊಳ್ಳಬೇಕು ಎಂದಿದ್ದರು.