ಪ್ರಧಾನಿ ಮೋದಿ ಎದುರು ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಹಿನ್ನಡೆ?
ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸಿದ ಎಸ್ಪಿ-ಬಿಎಸ್ಪಿ ಮೈತ್ರಿಕೂಟ
ಲಕ್ನೋ, ಎ.23: ಬಹುಜನ ಸಮಾಜವಾದಿ-ಸಮಾಜವಾದಿ ಪಕ್ಷ ಮೈತ್ರಿಕೂಟ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಈ ಮೂಲಕ ಮೊದಲ ಬಾರಿ ಚುನಾವಣಾ ಕಣಕ್ಕೆ ಧುಮುಕಲು ಯೋಚಿಸುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರ ಎದುರು ಸ್ಪರ್ಧೆಯ ಬಗ್ಗೆ ದೊಡ್ಡ ಪ್ರಶ್ನೆಯೊಂದು ಮೂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಫೆಬ್ರವರಿಯಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಚುನಾವಣೆಗೆ ಸ್ಪರ್ಧಿಸಲಿದ್ದಾರೆಂಬ ಮಾತು ಬಲವಾಗಿ ಕೇಳಿಬಂದಿತ್ತು. ಪ್ರಿಯಾಂಕಾ ಉತ್ತರಪ್ರದೇಶದ ಪೂರ್ವ ಭಾಗದ ಉಸ್ತುವಾರಿ ವಹಿಸಿದ್ದು, ಈ ಭಾಗದಲ್ಲೇ ವಾರಾಣಸಿ ಕ್ಷೇತ್ರವಿದೆ.
ಪ್ರಿಯಾಂಕಾ ಗಾಂಧಿ ಹಾಗೂ ಆಕೆಯ ಸಹೋದರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾರಾಣಸಿ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ಪ್ರಕಟಿಸದೇ ರಹಸ್ಯ ಕಾಯ್ದುಕೊಂಡಿದ್ದಾರೆ.
ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಕಾಂಗ್ರೆಸ್ನ ಮಾಜಿ ಶಾಸಕರೊಬ್ಬರ ಪುತ್ರಿ ಶಾಲಿನಿ ಯಾದವ್ರನ್ನು ವಾರಾಣಸಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಘೋಷಿಸಿದೆ. ಈ ಹಿಂದೆ ಶಾಲಿನಿ ವಾರಾಣಸಿ ಮೇಯರ್ ಚುನಾವಣೆಗೆ ಸ್ಪರ್ಧಿಸಿದ್ದರು.
2014ರಲ್ಲಿ ಕಾಂಗ್ರೆಸ್ ಪಕ್ಷ ಅಜಯ್ ರೈ ಅವರನ್ನು ಮೋದಿ ವಿರುದ್ಧ ಕಣಕ್ಕಿಳಿಸಿತ್ತು. ರೈ 3ನೇ ಸ್ಥಾನ ಪಡೆದಿದ್ದರು. ಮೋದಿಯ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ 2 ಲಕ್ಷ ಮತಗಳನ್ನು ಪಡೆದಿದ್ದರು. ಮೋದಿ 5.4 ಲಕ್ಷ ಮತ ಪಡೆದು 3.37 ಲಕ್ಷ ಅಂತರದಿಂದ ಜಯ ಸಾಧಿಸಿದ್ದರು.
ರಾಹುಲ್, ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ವಾರಾಣಸಿ ಅಭ್ಯರ್ಥಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ವಾರಾಣಸಿ ಚುನಾವಣೆಗೆ ಎ.22ರಿಂದ 29ರ ಮಧ್ಯೆ ನಾಮಪತ್ರ ಸಲ್ಲಿಸಬೇಕಾಗಿದೆ. ದೇಗುಲ ನಗರದಲ್ಲಿ ಮೇ 19 ರಂದು ಚುನಾವಣೆ ನಡೆಯಲಿದ್ದು, ಇದು ಲೋಕಸಭೆಯ ಕೊನೆಯ ಹಂತದ ಚುನಾವಣೆಯಾಗಿದೆ.