ಮೇ 23ರಂದು ತೈಲ ಬೆಲೆ 5ರಿಂದ 10 ರೂ.ವರೆಗೆ ಏರಿಸಲು ತಯಾರಿ ನಡೆದಿದೆ: ಕಾಂಗ್ರೆಸ್ ಆರೋಪ
“ಫಲಿತಾಂಶ ಘೋಷಣೆವರೆಗೆ ಬೆಲೆ ಹೆಚ್ಚಿಸದಂತೆ ತೈಲ ಕಂಪೆನಿಗಳಿಗೆ ಮೋದಿ ಹೇಳಿದ್ದಾರೆ”
ಹೊಸದಿಲ್ಲಿ, ಎ.23: ಲೋಕಸಭಾ ಚುನಾವಣೆಗಳ ಫಲಿತಾಂಶ ಘೋಷಣೆಯಾಗುವ ದಿನಾಂಕವಾದ ಮೇ 23ರ ತನಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಸದಂತೆ ಪ್ರಧಾನಿ ನರೇಂದ್ರ ಮೋದಿ ತೈಲ ಕಂಪೆನಿಗಳನ್ನು ಕೇಳಿಕೊಂಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ಯಾವುದೇ ನಿರ್ಬಂಧಗಳನ್ನು ಎದುರಿಸದೆ ಇರಾನ್ ನಿಂದ ತೈಲ ಖರೀದಿಸಲು ಭಾರತಕ್ಕೆ ಅನುಮತಿಸುವ ಕೆಲವೊಂದು ವಿನಾಯಿತಿಗಳಿಗೆ ಅಮೆರಿಕಾ ಅಂತ್ಯ ಹಾಡಲು ನಿರ್ಧರಿಸಿದ ಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನಿಯನ್ನು ಟೀಕಿಸಿದೆ.
“ಪ್ರತಿ ದಿನ ತಮ್ಮ ಶೌರ್ಯತನದ ಬಗ್ಗೆ ಕೊಚ್ಚಿಕೊಳ್ಳುವ ಮೋದೀ ಜಿ ಏಕೆ ಮೌನವಾಗಿದ್ದಾರೆ ?, ಜನರನ್ನು ವಂಚಿಸಿ ಮತಗಳನ್ನು ಪಡೆಯಲು ಅವರು ತೈಲ ಕಂಪೆನಿಗಳಿಗೆ ಮೇ 23ರ ತನಕ ಬೆಲೆ ಏರಿಸದಂತೆ ಹೇಳಿದ್ದಾರೆಂದು ಮೊದೀ ಜಿ ದೇಶಕ್ಕೆ ಏಕೆ ಹೇಳುತ್ತಿಲ್ಲ?'' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
“ಮೇ 23ರಂದು ಸಂಜೆ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ರೂ 5ರಿಂದ ರೂ 10ರ ತನಕ ಏರಿಸಲು ತಯಾರಿ ನಡೆದಿದೆ'' ಎಂದು ಅವರು ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.
``ಕಚ್ಛಾ ತೈಲ ಬೆಲೆಗಳು ಗಗನಕ್ಕೇರಿವೆ- ಆರು ತಿಂಗಳಲ್ಲಿಯೇ ಗರಿಷ್ಠ. ರೂಪಾಯಿ ಬೆಲೆ ಕುಸಿದಿದೆ. ಇರಾನ್ ದೇಶದಿಂದ ಕಚ್ಛಾ ತೈಲ ಆಮದು ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ'' ಎಂದು ಟ್ವೀಟ್ ಮಾಡಿರುವ ಸುರ್ಜೇವಾಲ ಪ್ರಧಾನಿ ಮೌನ ಪ್ರೇಕ್ಷಕನಂತೆ ಕುಳಿತಿದ್ದಾರೆಂದು ಆರೋಪಿಸಿದ್ದಾರೆ.