ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾಗೆ ಇಲ್ಲದ ನಿಷೇಧ ನನ್ನ ಮೇಲೇಕೆ: ಹಾರ್ದಿಕ್ ಪಟೇಲ್ ಪ್ರಶ್ನೆ
ಅಹ್ಮದಾಬಾದ್, ಎ.23: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಗೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿದೆ, ಆದರೆ ನನಗೆ ಸಾಧ್ಯವಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಪಾಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ಸಂತೋಷವಾಗಿಲ್ಲ. ಆಕೆ (ಸಾಧ್ವಿ ಪ್ರಜ್ಞಾ) ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಆದರೆ ನನಗೆ ಚುನಾವಣೆ ಸ್ಪರ್ಧಿಸುವುದರಿಂದ ನಿರ್ಬಂಧ ಹೇರಲಾಗಿದೆ, ಇದು ತಪ್ಪು. ಇದು ಹೀಗಾಗಬಾರದಿತ್ತು'' ಎಂದು ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿದ ಪಟೇಲ್ ಹೇಳಿದರು.
ಹೇಮಂತ್ ಕರ್ಕರೆ ಬಗ್ಗೆ ಸಾಧ್ವಿ ನೀಡಿದ ಹೇಳಿಕೆಯನ್ನೂ ಹಾರ್ದಿಕ್ ಪಟೇಲ್ ಟೀಕಿಸಿದರು.
ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, “ಗುಜರಾತ್ ಜನರನ್ನು ವಂಚಿಸಿದ ಬಿಜೆಪಿ ಈ ಬಾರಿ ರಾಜ್ಯದಲ್ಲಿ 10-12 ಸ್ಥಾನಗಳನ್ನು ಕಳೆದುಕೊಳ್ಳಲಿದೆ'' ಎಂದರು. ಕಳೆದ ಬಾರಿ ಪಕ್ಷ ರಾಜ್ಯದ ಎಲ್ಲಾ 26 ಸ್ಥಾನಗಳನ್ನೂ ಗೆದ್ದಿತ್ತು.
ಗುಜರಾತ್ ನ ಭವಿಷ್ಯದ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ನಕ್ಕ ಹಾರ್ದಿಕ್ , “ನಾನು ಭವಿಷ್ಯದ ಗುಜರಾತ್ ಸಿಎಂ ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದರು. ``ಪಕ್ಷ ಹಾಗೂ ಜನರ ನಿರ್ಧಾರದಂತೆ ಎಲ್ಲವೂ ನಡೆಯುತ್ತದೆ,'' ಎಂದು ಅವರು ಹೇಳಿದರು.
ಗುಜರಾತ್ ಜನರು ಆಡಳಿತ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಬಿಜೆಪಿ ಜನರನ್ನು ತಪ್ಪು ದಾರಿಗೆಳೆದಿದೆ. ಗುಜರಾತ್ ಜನರು ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. “ವಿಪಕ್ಷದಲ್ಲಿರುವ ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡುತ್ತಿದೆ, ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ'' ಎಂದ ಹಾರ್ದಿಕ್, ಮೋದಿ ಅಲೆ ಬಗ್ಗೆ ಪ್ರಶ್ನಿಸಿದಾಗ ``ಈ ಬಾರಿ ಮೋದಿ ಅಲೆ ಇಲ್ಲ. ಜನರು ವಿಷಯಾಧರಿತ ಮತದಾನ ನಡೆಸಲಿದ್ದಾರೆ ಎಂದರು.
“ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಾಮಾಣಿಕ ವ್ಯಕ್ತಿ. ದೇಶಕ್ಕೆ ಅವರು ಅತ್ಯುತ್ತಮ ಪ್ರಧಾನಿಯಾಗಬಲ್ಲರು'' ಎಂದು ಹಾರ್ದಿಕ್ ಇದೇ ಸಂದರ್ಭ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.