ಕೇರಳ ಲೋಕಸಭಾ ಚುನಾವಣೆ: ಶೇ. 73 ಮತದಾನ
ತಿರುವನಂತಪುರ, ಎ. 23: ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ. 73.06 ಮತದಾನವಾಗಿದೆ. ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ತಮ್ಮ ತವರೂರಾದ ಕೋಟ್ಟಯಂನ ಪುದುಪಲ್ಲಿಯಲ್ಲಿ ಮತ ಚಲಾಯಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತನ್ನ ಪಕ್ಷ ಅಭೂತಪೂರ್ವವಾಗಿ ಜಯ ಗಳಿಸಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಊಮ್ಮನ್ ಚಾಂಡಿ ಅವರ ಭವಿಷ್ಯ ನುಡಿಯ ಬಗ್ಗೆ ವ್ಯಂಗ್ಯವಾಡಿರುವ ಸಿಪಿಐ-ಎಂನ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್, ‘‘ಈ ಹಿಂದಿನ ಚುನಾವಣೆಯಲ್ಲೇ ಅವರ ಭವಿಷ್ಯ ಸುಳ್ಳಾಗಿದೆ. ಕಾದು ನೋಡಿ, ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಎಡರಂಗ 2014ಕ್ಕಿಂತ ಉತ್ತಮ ಸಾಧನೆ ತೋರಿಸಲಿದೆ’’ ಎಂದಿದ್ದಾರೆ. ಹಲವು ಮತಗಟ್ಟೆಗಳಲ್ಲಿ ಇವಿಎಂ ದೋಷಗಳ ಬಗ್ಗೆ ಮತದಾರರು ದೂರಿದ್ದಾರೆ. ಆದರೆ, ಕೇರಳದ ಮುಖ್ಯ ಚುನಾವಣಾ ಅಧಿಕಾರಿ ಟೀಕಾ ರಾಮ್ ಮೀನಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾತ್ರಿ ಮಳೆ ಸುರಿದರೆ ತೇವದಿಂದ ಇವಿಎಂ ಕಾರ್ಯ ನಿರ್ವಹಣೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಪ್ರತಿಯೊಬ್ಬರಿಗೂ ಮಾಹಿತಿ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದು ರಾಜ್ಯವ್ಯಾಪಿ ಸಮಸ್ಯೆ ಆಗಿರಲಿಲ್ಲ. ಕೆಲವು ಸ್ಥಳಗಳಲ್ಲಿ ಮಾತ್ರ ಸಂಭವಿಸಿದೆ. ತೊಂದರೆಗಳನ್ನು ಗುರುತಿಸಿ ಸರಿಪಡಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.
ತಿರುವನಂತಪುರದ ಮತಗಟ್ಟೆಯೊಂದರ ಒಳಗೆ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ನಡುವೆ ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ 9 ಮಂದಿ ನಾಗರಿಕರು ಕುಸಿದು ಮೃತಪಟ್ಟಿದ್ದಾರೆ.
ಮತದಾರನ ವಿರುದ್ಧ ಪ್ರಕರಣ ದಾಖಲು
ವಿವಿಪ್ಯಾಟ್ ತನ್ನ ಮತವನ್ನು ಇನ್ನೋರ್ವ ಅಭ್ಯರ್ಥಿಗೆ ದಾಖಲಿಸಿದೆ ಎಂಬ ಪ್ರತಿಪಾದನೆ ಸಾಬೀತುಪಡಿಸಲು ವಿಫಲವಾದ ಮತದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಾನು ಹಾಕಿದ ಮತ ಹಾಗೂ ವಿವಿ ಪ್ಯಾಟ್ ನಡುವೆ ಭಿನ್ನತೆ ಇತ್ತು ಎಂದು ಪಟ್ಟಂ ಪ್ಲಾಮೂಡುನ ಎಬಿನ್ ಬಾಬು ಹೇಳಿದ್ದರು. ಪರಿಶೀಲನೆ ನಡೆಸಿದ ಬಳಿಕ ಅವರ ಪ್ರತಿಪಾದನೆ ಸುಳ್ಳು ಎಂಬುದು ತಿಳಿದುಬಂತು. ಮೆಡಿಕಲ್ ಕಾಲೇಜ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.