ಬಿಜೆಪಿ ಸಂಸದ ಉದಿತ್ ರಾಜ್ ಕಾಂಗ್ರೆಸ್ಗೆ ಸೇರ್ಪಡೆ
ಹೊಸದಿಲ್ಲಿ, ಎ.24: ವಾಯುವ್ಯ ದಿಲ್ಲಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಹಾಲಿ ಸಂಸದ, ದಲಿತ ನಾಯಕ ಉದಿತ್ ರಾಜ್ ಬುಧವಾರ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಬಿಜೆಪಿ ಮಂಗಳವಾರ ವಾಯುವ್ಯ ದಿಲ್ಲಿ ಕ್ಷೇತ್ರಕ್ಕೆ ಖ್ಯಾತ ಗಾಯಕ ಹನ್ಸ್ ರಾಜ್ ಹನ್ಸ್ರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ತನಗೆ ಟಿಕೆಟ್ ನೀಡದಿದ್ದರೆ ಪಕ್ಷ ಬಿಡುವುದಾಗಿ ಉದಿತ್ ನೀಡಿದ್ದ ಬೆದರಿಕೆಯನ್ನು ಪಕ್ಷ ನಿರ್ಲಕ್ಷಿಸಿತ್ತು.
‘‘ನಾನು ಬಿಜೆಪಿಯ ಓರ್ವ ಶ್ರೇಷ್ಠ ಸಂಸದನ ಪೈಕಿ ಒಬ್ಬನಾಗಿದ್ದೆ. ಕ್ಷೇತ್ರದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದೆ. ನನ್ನ ಮೇಲೆ ದಲಿತರಿಗೆ ಪ್ರಭಾವ ಬೀರಿದ್ದೇನೆಂದು ಆರೋಪ ಮಾಡಲಾಗಿತ್ತು’’ ಎಂದು ಬಿಜೆಪಿ ಬಿಟ್ಟ ತನ್ನ ನಿರ್ಧಾರದ ಬಗ್ಗೆ ಉದಿತ್ ರಾಜ್ ಪ್ರತಿಕ್ರಿಯಿಸಿದರು.
ಉದಿತ್ 2014ರ ಫೆಬ್ರವರಿಯಲ್ಲಿ ತನ್ನ ಇಂಡಿಯನ್ ಜಸ್ಟಿಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಆ ಬಳಿಕ ವಾಯುವ್ಯ ದಿಲ್ಲಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದರು. ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯ ಎಲ್ಲ 7 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.