11,12ನೆ ತರಗತಿ ಫಲಿತಾಂಶದಲ್ಲಿ ಪ್ರಮಾದ: ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ?
ಮಕ್ಕಳಿಗೆ 1,2 ಅಂಕ, ಪ್ರತಿಭಾನ್ವಿತರು ಅನುತ್ತೀರ್ಣ
ಹೈದರಾಬಾದ್, ಎ. 24: ತೆಲಂಗಾಣ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿ 11 ಹಾಗೂ 12ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಎಪ್ರಿಲ್ 18ರಂದು ಪ್ರಕಟಿಸಿದ್ದು, ಪ್ರಮಾದದಿಂದ ಪರೀಕ್ಷೆಗೆ ಹಾಜರಾದ 9 ಲಕ್ಷ ವಿದ್ಯಾರ್ಥಿಗಳಲ್ಲಿ ಕೇವಲ 3 ಲಕ್ಷ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ದ್ದಾರೆ. ಈ ಅವಾಂತರದಿಂದ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿಭಾವಂತ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದವರು ಗೈರು ಹಾಜರು ಎಂದು ದಾಖಲಾಗಿದೆ. ಕೆಲವರಿಗೆ 1 ಅಂಕ, ಇನ್ನು ಕೆಲವರಿಗೆ 2 ಅಂಕ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಫಲಿತಾಂಶದಿಂದ ಆಘಾತಗೊಂಡಿರುವ ಹೆತ್ತವರು ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕೈಜೋಡಿಸಿರುವ ಹೋರಾಟಗಾರರು ಹಾಗೂ ಪ್ರತಿಪಕ್ಷಗಳ ರಾಜಕಾರಣಿ ಗಳು ಶಿಕ್ಷಣ ಸಚಿವ ಜಿ. ಜಗದೀಶ್ ರೆಡ್ಡಿ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಂಡಳಿ, ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಕೆಲಸವನ್ನು ಖಾಸಗಿ ಕಂಪೆನಿ ಗ್ಲೋಬರೇನಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ಗೆ ನೀಡಲಾಗಿದೆ. ಪ್ರವೇಶಾತಿ ದತ್ತಾಂಶ, ಸೀಟು ಹಂಚಿಕೆ, ಕೇಂದ್ರ ಮಂಜೂರು ಹಾಗೂ ಫಲಿತಾಂಶದ ಪ್ರಕ್ರಿಯೆಯನ್ನು ಈ ಸಂಸ್ಥೆಗೆ ವಹಿಸಿಕೊಡಲಾಗಿದೆ ಎಂದು ಹೇಳಿದೆ.