ರೋಡ್ ಶೋ ವಿಫಲಗೊಳಿಸಲು ಯತ್ನ: ಬಿಜೆಪಿ ವಿರುದ್ಧ ಕನ್ಹಯ್ಯಾ ಕುಮಾರ್ ಆರೋಪ
ಬೇಗುಸರಾಯ್, ಎ. 25: ತನ್ನ ಮೇಲಿನ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಮೂಲಕ ತನ್ನ ರೋಡ್ಶೋ ವಿಫಲಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬಿಹಾರದ ಬೇಗುಸರಾಯ್ ಅಭ್ಯರ್ಥಿ ಹಾಗೂ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯಾ ಕುಮಾರ್ ಆರೋಪಿಸಿದ್ದಾರೆ.
‘‘ನನ್ನ ರ್ಯಾಲಿಯಲ್ಲಿ ಬಿಜೆಪಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಮತ ಕೇಳುವ ಸಾಂವಿಧಾನಿಕ ಹಕ್ಕು ಇದೆ. ರೋಡ್ಶೋಗೆ ಅಡ್ಡಿ ಉಂಟು ಮಾಡುವುದು ಕಾನೂನಿನ ಉಲ್ಲಂಘನೆ’’ ಎಂದು ಅವರು ಹೇಳಿದ್ದಾರೆ. ರೋಡ್ ಶೋಗೆ ಅಡ್ಡಿ ಉಂಟು ಮಾಡಿದವರು ಗಿರಿರಾಜ್ ಸಿಂಗ್ ರ್ಯಾಲಿಯಲ್ಲಿ ಆಗಾಗ ಪಾಲ್ಗೊಳ್ಳುತ್ತಿರುವುದನ್ನು ನೋಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
“ಬೇಗುಸರಾಯ್ ತ್ರಿಕೋನ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆ ತ್ರಿಕೋನವಲ್ಲ. ನಾನು ಬಿಜೆಪಿಯೊಂದಿಗೆ ಸ್ಪರ್ಧಿಸುತ್ತಿದ್ದೇನೆ. ನಾನು ಅವರ ನಕಲಿ ಭರವಸೆ ಹಾಗೂ ಸುಳ್ಳಿನ ವಿರುದ್ಧ ಸ್ಪರ್ಧಿಸುತ್ತಿದ್ದೇನೆ” ಎಂದಿದ್ದಾರೆ. ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಕನ್ಹಯ್ಯ ಕುಮಾರ್ ಬಿಜೆಪಿಯ ಗಿರಿರಾಜ್ ಸಿಂಗ್ ಹಾಗೂ ಆರ್ಜೆಡಿಯ ತನ್ವೀರ್ ಹಸ್ಸನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕನ್ಹಯ್ಯ, ನರೇಂದ್ರ ಮೋದಿ ಅವರು ನಕಲಿ ಅಜೆಂಡಾದ ಮೇಲೆ ಸ್ಪರ್ಧಿಸುತ್ತಿದ್ದಾರೆ ಹಾಗೂ ಅವರು ತಳಮಟ್ಟದ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದಿದ್ದಾರೆ.