ನಾಪತ್ತೆಯಾಗಿದ್ದ ಇ.ಸಿ. ನೋಡೆಲ್ ಅಧಿಕಾರಿ ಪತ್ತೆ
ಕೋಲ್ಕತ್ತಾ, ಎ. 25: ಏಳು ದಿನಗಳ ಹಿಂದೆ ಕೃಷ್ಣನಗರದಿಂದ ನಾಪತ್ತೆಯಾಗಿದ್ದ ಚುನಾವಣಾ ಆಯೋಗದ ನೋಡಲ್ ಅಧಿಕಾರಿಯನ್ನು ಹೌರಾಹ್ನ ಅವರ ಮನೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಪಶ್ಚಿಮ ಬಂಗಳಾದ ಸಿಐಡಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಫೋನ್ ಲೊಕೇಶನ್ ಗಮನಿಸಿ ನೋಡೆಲ್ ಅಧಿಕಾರಿ ಅರ್ನಬ್ ರಾಯ್ ಅವರನ್ನು ಅವರ ಮನೆಯಿಂದ ಪತ್ತೆ ಮಾಡಲಾಗಿದೆ. ‘‘ರಾಯ್ ಅವರನ್ನು ಹೌರಾಹ್ನಲ್ಲಿರುವ ಅವರ ಮನೆಯಿಂದ ಇಂದು ಬೆಳಗ್ಗೆ ಪತ್ತೆ ಮಾಡಲಾಗಿದೆ. ಅವರು ಸುರಕ್ಷಿತವಾಗಿದ್ದಾರೆ’’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಯ್ ಅವರು ಬಳಲಿದಂತೆ ಕಂಡು ಬಂದಿದ್ದಾರೆ ಎಂದು ಇನ್ನೋರ್ವ ಸಿಐಡಿ ಅಧಿಕಾರಿ ತಿಳಿಸಿದ್ದಾರೆ.
ರಾಯ್ ಅವರು ರಾಣಾಘಾಟ್ ಲೋಕಸಭಾ ಕ್ಷೇತ್ರದ ಇವಿಎಂ ಹಾಗೂ ವಿವಿಪ್ಯಾಟ್ನ ಉಸ್ತುವಾರಿ ಅಧಿಕಾರಿಯಾಗಿದ್ದರು. ಅವರನ್ನು ಕೃಷ್ಣನಗರಕ್ಕೆ ನಿಯೋಜಿಸಲಾಗಿತ್ತು. ಎಪ್ರಿಲ್ 18ರಂದು ರಾಯ್ ಅವರು ತಮ್ಮ ಅಧಿಕೃತ ನಿವಾಸದಿಂದ ಕೆಲಸದ ಹಿನ್ನೆಲೆಯಲ್ಲಿ ಬಿಪ್ರದಾಸ್ ಚೌಧರಿ ಪೊಲಿಟೆಕ್ನಿಕ್ ಕಾಲೇಜಿಗೆ ತೆರಳಿದ್ದರು. ಅಲ್ಲಿಂದ ಅವರು ನಾಪತ್ತೆಯಾಗಿದ್ದರು.