ವಿಶ್ವ ಸುತ್ತಿದ ಮೋದಿ ವಾರಣಾಸಿಯ ಹಳ್ಳಿಗಳನ್ನು ಮರೆತರು: ಪ್ರಿಯಾಂಕಾ ವಾಗ್ದಾಳಿ
ಉನ್ನಾವೊ, ಎ.28: ವಾರಣಾಸಿಯಿಂದ ಮರು ಆಯ್ಕೆ ಬಳಸಿ ನಾಮಪತ್ರ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರದ ಒಂದು ಹಳ್ಳಿಗೂ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಪಾದಿಸಿದ್ದಾರೆ.
"ಪ್ರಧಾನಿ ವಿಶ್ವ ಸುತ್ತಿದ್ದಾರೆ; ವಾರಣಾಸಿಯಲ್ಲಿ ದೋಣಿ ವಿಹಾರ ನಡೆಸಿದ್ದಾರೆ; ಆದರೆ ತಮ್ಮ ಲೋಕಸಭಾ ಕ್ಷೇತ್ರದ ಒಂದು ಹಳ್ಳಿಗೂ ಇದುವರೆಗೆ ಭೇಟಿ ನೀಡಿಲ್ಲ" ಎಂದು ಉನ್ನಾವೊ ಕಾಂಗ್ರೆಸ್ ಅಭ್ಯರ್ಥಿ ಅನ್ನು ತಂಡನ್ ಪ್ರಚಾರಾರ್ಥವಾಗಿ ನಡೆದ ರೋಡ್ ಶೋದಲ್ಲಿ ಪ್ರಿಯಾಂಕಾ ಟೀಕಿಸಿದರು.
"ಪ್ರಧಾನಿ ಮೋದಿ ಕನಿಷ್ಠ ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಜತೆ ಚರ್ಚಿಸಿ, ವಾಸ್ತವ ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿತ್ತು" ಎಂದು ಅಭಿಪ್ರಾಯಪಟ್ಟರು.
ರ್ಯಾಲಿಗೆ ಮುನ್ನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರತಿಮೆಗೆ ಪ್ರಿಯಾಂಕಾ ಮಾಲಾರ್ಪಣೆ ಮಾಡಿದರು. ಪ್ರಚಾರದ ವೇಳೆ ಬೆಂಬಲಿಗರು ಪ್ರಿಯಾಂಕಾ ಮೇಲೆ ಪುಷ್ಪವೃಷ್ಟಿ ಮಾಡಿದರು. ರೋಡ್ಶೋ ಚುರಾಹಾ ಪ್ರದೇಶವನ್ನು ತಲುಪಿದಾಗ ಕೆಲ ಬಿಜೆಪಿ ಕಾರ್ಯಕರ್ತರು ಕಪ್ಪು ಕರ್ಚೀಫ್ಗಳನ್ನು ಬೀಸಿ ರ್ಯಾಲಿಗೆ ತಡೆಯೊಡ್ಡುವ ಪ್ರಯತ್ನ ಮಾಡಿದರು. ಮೋದಿ ಪರವಾಗಿ ಅವರು ಘೋಷಣೆ ಕೂಗುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ತಮ್ಮ ಪಕ್ಷದ ಪರ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಕೈಮೀರುವ ಸೂಚನೆ ಅರಿತ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಹಿಂದಕ್ಕೆ ಕಳುಹಿಸಿದರು.