ಶರದ್ ಪವಾರ್ ಪ್ರಕಾರ ಈ 3 ವಿಪಕ್ಷ ನಾಯಕರು ಪ್ರಧಾನಿ ಹುದ್ದೆಯ ಸ್ಪರ್ಧಿಗಳು...
ಹೊಸದಿಲ್ಲಿ,ಎ.28: ಲೋಕಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರಧಾನಿ ಹುದ್ದೆಯ ಪ್ರಮುಖ ಸ್ಪರ್ಧಿಗಳಾಗಿದ್ದಾರೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ತಿಳಿಸಿದ್ದಾರೆ.
“ನನ್ನ ಪ್ರಕಾರ, ಎನ್ಡಿಎ ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸುವುದು ದೂರದ ಮಾತು. ಹಾಗಾಗಿ ಬ್ಯಾನರ್ಜಿ, ನಾಯ್ಡು ಅಥವಾ ಮಾಯಾವತಿ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಪವಾರ್ ಅಭಿಪ್ರಾಯಿಸಿದ್ದಾರೆ.
ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಿಂತ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಮತ್ತು ಮಾಯಾವತಿ ಉತ್ತಮ ಆಯ್ಕೆಯಾಗಿದ್ದಾರೆ” ಎಂದು ತಾನು ಝೀ ನ್ಯೂಸ್ಗೆ ತಿಳಿಸಿದ್ದೇನೆ ಎನ್ನುವುದು ಅಪ್ಪಟ ಸುಳ್ಳು. ರಾಹುಲ್ ಗಾಂಧಿ ಖುದ್ದಾಗಿ ತಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಪವಾರ್ ತಿಳಿಸಿದ್ದಾರೆ.
ಎನ್ಡಿಎ ಬಹುಮತ ಗಳಿಸಲು ವಿಫಲವಾದಲ್ಲಿ ಬಿಜೆಪಿ ವಿರೋಧಿ ಪಕ್ಷಗಳನ್ನು ಒಟ್ಟುಸೇರಿಸುವಲ್ಲಿ ಶರದ್ ಪವಾರ್ ಪ್ರಮುಖ ಪಾತ್ರ ನಿಬಾಯಿಸಲಿದ್ದಾರೆ.
ಮೋದಿಯವರನ್ನು ಅಧಿಕಾರದಿಂದ ದೂರಇಡುವ ಉದ್ದೇಶದಿಂದ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ ಕೂಡಾ ಪವಾರ್ ಪ್ರಸ್ತಾವವನ್ನು ಒಪ್ಪಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕರು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.