ಪಾರಿಕ್ಕರ್ ಪುತ್ರನನ್ನು ಕಡೆಗಣಿಸಿ ಮಾಜಿ ಶಾಸಕನನ್ನು ಕಣಕ್ಕಿಳಿಸಿದ ಬಿಜೆಪಿ !
ಪಣಜಿ ವಿಧಾನಸಭಾ ಕ್ಷೇತ್ರ ಉಪಚುನಾವಣೆ
ಪಣಜಿ,ಎ.28: ಮಾಜಿ ಕೇಂದ್ರ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ನಿಧನದಿಂದಾಗಿ ತೆರವಾಗಿರುವ ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಅವರ ಹಿರಿಯ ಪುತ್ರ ಉತ್ಪಲ್ ಪಾರಿಕ್ಕರ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದೆ. ಬದಲಿಗೆ ಪಾರಿಕ್ಕರ್ ಅವರ ಮಾಜಿ ಬಂಟ ಸಿದ್ಧಾರ್ಥ ಕುಂಕೋಳಿಂಕರ್ ಅವರನ್ನು ಸ್ಪರ್ಧೆಗಿಳಿಸಲಿದೆ. ಪಕ್ಷದ ಚುನಾವಣಾ ಸಮಿತಿಯು ರವಿವಾರ ಮಧ್ಯಾಹ್ನ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಹಿಂದೆ ಪಾರಿಕ್ಕರ್ ಅವರು ರಕ್ಷಣಾ ಸಚಿವರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ದಿಲ್ಲಿಗೆ ತೆರಳಿದ್ದಾಗ ಕುಂಕೋಳಿಂಕರ್ ಅವರು ಪಣಜಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2017ರಲ್ಲಿ ಮರುಆಯ್ಕೆಯಾಗಿದ್ದರಾ ದರೂ ಪಾರಿಕರ್ ಅವರು ಗೋವಾದ ಮುಖ್ಯಮಂತ್ರಿಯಾಗಿ ಮರಳಿದ್ದರಿಂದ ಅವರ ವಿಧಾನಸಭಾ ಪ್ರವೇಶಕ್ಕೆ ಅನುಕೂಲವಾಗಲು ಶಾಸಕ ಸ್ಥಾನವನ್ನು ತೊರೆದಿದ್ದರು. ಹಾಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಟಾನ್ಸಿಯೊ ಮೊನ್ಸರೆಟ್ ಅವರನ್ನು 2017ರಲ್ಲಿ ಕುಂಕೋಳಿಂಕರ್ ಸುಮಾರು 1,000 ಮತಗಳ ಅಲ್ಪ ಅಂತರದಿಂದ ಸೋಲಿಸಿದ್ದರು.
ಪಣಜಿ ಕ್ಷೇತ್ರದಲ್ಲಿ ಉತ್ಪಲ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ಹಿಂದೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಉತ್ಪಲ್,ತಾನಿನ್ನೂ ಆ ಬಗ್ಗೆ ಯೋಚಿಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ತನಗೆ ಪಕ್ಷದ ಏಕೈಕ ಸಂದೇಶವಾಗಿದೆ ಎಂದು ತಿಳಿಸಿದ್ದರು.
ಪಾರಿಕ್ಕರ್ ನಿಧನದ ನಂತರ ಅನುಕಂಪದ ಲಾಭ ಪಡೆಯಲು ಬಿಜೆಪಿ ಉತ್ಪಲ್ ಹೆಸರನ್ನು ತೇಲಿಬಿಟ್ಟಿತ್ತು. ಆದರೆ ನಿರೀಕ್ಷಿತ ಪ್ರತಿಕ್ರಿಯೆ ಪಡೆಯಲು ವಿಫಲಗೊಂಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 19ರಂದು ಮತದಾನ ನಡೆಯಲಿದೆ.