ಮೇ 3ರೊಳಗೆ ಒಡಿಶಾಗೆ ಅಪ್ಪಳಿಸಲಿದೆ ಫನಿ: ಬಂಗಾಳಕೊಲ್ಲಿಯಲ್ಲಿ ತೀವ್ರ ಸ್ವರೂಪಪಡೆದ ಚಂಡಮಾರುತ
ಸನ್ನದ್ಧವಾಗಿರಲು ಸೇನೆ, ಕರಾವಳಿಗೆ ರಕ್ಷಣೆ ಪಡೆಗೆ ಸೂಚನೆ
ಭುವನೇಶ್ವರ, ಎ.30: ಬಂಗಾಳಕೊಲ್ಲಿಗೆ ಸಾಗಿರುವ ‘ಫನಿ’ ಚಂಡಮಾರುತ ಚಂಡಮಾರುತವು ಮಂಗಳವಾರ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಅದು ಶುಕ್ರವಾರದೊಳಗೆ ಪುರಿ ಹಾಗೂ ಕೇಂದ್ರಪಾರ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆಯೆಂದು, ಹವಾಮಾನ ಇಲಾಖೆ ತಿಳಿಸಿದೆ.
ಆದರೆ ಫಾನಿ ಚಂಡಮಾರುತವು ಅಪ್ಪಳಿಸುವ ನಿಖರ ಪ್ರದೇಶ ಯಾವುದೆಂಬ ಬಗ್ಗೆ ಅದು ಯಾವುದೇ ಮಾಹಿತಿಯನ್ನು ನೀಡಿಲ್ಲ.
‘‘ಫನಿ ಚಂಡಮಾರುತವು ಪುರಿ ಜಿಲ್ಲೆಯ ಸಾತಪಾಡ ಅಥವಾ ಚಂದ್ರಭಾಗ ಹಾಗೂ ಕೇಂದ್ರಪಾರ ಜಿಲ್ಲೆಯ ಗುಪ್ತಿ ನಡುವಿನ ಯಾವುದಾದರೂ ಪ್ರದೇಶದ ಮೇಲೆ ಮೇ3ರ ರಾತ್ರಿ ವೇಳೆಗೆ ಅಪ್ಪಳಿಸುವ ನಿರೀಕ್ಷೆಯಿದೆ’’ ಎಂದು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಸಿ) ಬಿ.ಪಿ.ಸೇಠಿ ತಿಳಿಸಿದ್ದಾರೆ.
ಚಂಡಮಾರುತ ಫನಿ ಬಂಗಾಳಕೊಲ್ಲಿಯಲ್ಲಿ ತೀವ್ರತೆಯನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪಶ್ಚಿಮಬಂಗಾಳ ರಾಜ್ಯಗಳಿಗೆ ಮುಂಚಿತವಾಗಿಯೇ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (ಎಸ್ಡಿಆರ್ಎಫ್) ಅನ್ನು ಬಿಡುಗಡೆಗೊಳಿಸಲಾಗಿದೆ.
ಫನಿ ಚಂಡಮಾರುತದ ಪರಿಣಾಮವು, ಕಳೆದ ವರ್ಷ ಆಂಧ್ರ ಕರಾವಳಿಗೆ ಅಪ್ಪಳಿಸಿದ ‘ತಿತ್ಲಿ’ ಚಂಡಮಾರುತಕ್ಕಿಂತಲೂ ಹೆಚ್ಚು ತೀವ್ರವಾಗಿರುವುದೆಂದು ವಿಶಾಖಪಟ್ಟಣಂನಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್.ಬಿಶ್ವಾಸ್ ಎಚ್ಚರಿಕೆ ನೀಡಿದ್ದಾರೆ.
ಫನಿ ಚಂಡಮಾರುತದ ಹಿನ್ನೆಲೆಯಲ್ಲಿ ಮೇ 2ರಂದು ಬಂಗಾಳಕೊಲ್ಲಿಯ ಹಲವಾರು ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಹಾಗೂ ಮೇ 3ರಂದು ಮಳೆಯ ತೀವ್ರ ಸ್ವರೂಪವನ್ನು ಪಡೆದುಕೊಳ್ಳಲಿದೆ ಮತ್ತು ತಾಸಿಗೆ 70 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆಯೆಂದು ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಠಿ ತಿಳಿಸಿದ್ದಾರೆ.
ಸಮುದ್ರವು ಅತ್ಯಂತ ಪ್ರಕ್ಷುಬ್ಧವಾಗಿರುವುದರಿಂದ ಮೇ 2ರಿಂದ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಗಳಿಗೆ ಮೀನುಗಾರರು ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಂಡಮಾರುತದಿಂದಾಗಿ ಉದ್ಭವಿಸುವ ಯಾವುದೇ ಬಗೆಯ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ವಾಯುಪಡೆ, ನೌಕಾಪಡೆ ಹಾಗೂ ಕರಾವಳಿ ತಟರಕ್ಷಣಾ ಪಡೆಗಳನ್ನು ಜಾಗೃತಗೊಳಿಸಲಾಗಿದೆ ಎಂದು ಸೇಠಿ ತಿಳಿಸಿದರು.
ಒಡಿಶಾ ವಿಪತ್ತು ಕಾರ್ಯಾಚರಣೆ ಪಡೆ (ಓಡಿಆರ್ಎಎಫ್), ರಾಷ್ಟ್ರೀಯ ವಿಪತ್ತ ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್) ಹಾಗೂ ಅಗ್ನಿಶಾಮಕದಳಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆಯೆಂದು ಅವರು ತಿಳಿಸಿದರು.