ಅಮೇಥಿ, ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಗೆ ಮತ ಚಲಾಯಿಸಿ: ಕಾರ್ಯಕರ್ತರಿಗೆ ಮಾಯಾವತಿ ಕರೆ
ಲಕ್ನೊ, ಮೇ 5: ಉತ್ತರಪ್ರದೇಶದ ಅಮೇಠಿ ಹಾಗೂ ರಾಯಬರೇಲಿಯಲ್ಲಿ ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ರವಿವಾರ ಎಸ್ಪಿ-ಬಿಎಸ್ಪಿ ಮೈತ್ರಿಯ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ಅಮೇಠಿ, ರಾಯ್ ಬರೇಲಿ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧಿಸುತ್ತಿದ್ದರೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ಬರೇಲಿಯ ಅಭ್ಯರ್ಥಿ.
ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ರೀತಿ. ನಾವು ಕಾಂಗ್ರೆಸ್ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಆದರೆ, ಬಿಜೆಪಿಯನ್ನು ಸೋಲಿಸಲು ನಮ್ಮ ಮೈತ್ರಿ ಅಮೇಠಿ ಹಾಗೂ ರಾಯ್ಬರೇಲಿಯಲ್ಲಿ ಕಾಂಗ್ರೆಸ್ಗೆ ಮತ ನೀಡಲಿದೆ ಎಂದು ಮಾಯಾವತಿ ಹೇಳಿದ್ದಾರೆ.
ನಾಲ್ಕು ಹಂತದ ಚುನಾವಣೆಯಲ್ಲಿ ಜನರು ಎಸ್ಪಿ-ಬಿಎಸ್ಪಿಯನ್ನು ಬೆಂಬಲಿಸಿದೆ. ಈ ಮೈತ್ರಿ ಕೇಂದ್ರದಲ್ಲಿ ನೂತನ ಪ್ರಧಾನಿಯನ್ನು ಮಾತ್ರವಲ್ಲ, ಉತ್ತರ ಪ್ರದೇಶದಲ್ಲಿ ಹೊಸ ಸರಕಾರವನ್ನು ಅಸ್ತಿತ್ವಕ್ಕೆ ತರಲಿದೆ ಎಂದು ಅವರು ಹೇಳಿದರು.
ಮೇ 23ರಂದು ನಿರುಂಕುಶಾಧಿಕಾರ ಹಾಗೂ ಅಹಂಕಾರದ ಆಡಳಿತದಿಂದ ಭಾರತ ವಿಮೋಚನೆ ಪಡೆಯಲಿದೆ ಎಂದು ಮಾಯಾವತಿ ಹೇಳಿದರು.