ಅಮರನಾಥ ಯಾತ್ರೆ: ಎಲ್ಒಸಿ, ಐಬಿಯಲ್ಲಿ ಕಟ್ಟೆಚ್ಚರ
ಜಮ್ಮು, ಮೇ 5: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಗುಹಾಂತರ ದೇವಾಲಯದ ವಾರ್ಷಿಕ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿರುವ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 1ರಿಂದ ಆರಂಭವಾಗಿ ಆಗಸ್ಟ್ 15ರಂದು ಅಂತ್ಯಗೊಳ್ಳಲಿರುವ 45 ದಿನಗಳ ಯಾತ್ರೆ ಎರಡು ರಸ್ತೆಯಲ್ಲಿ ಆರಂಭವಾಗಲಿದೆ. ಒಂದು ಸಾಂಪ್ರದಾಯಿಕವಾದ ಅನಂತ್ನಾಗ್ ಜಿಲ್ಲೆಯ ಪಹಾಲ್ಗಾಂವ್ ದಾರಿ ಹಾಗೂ ಇನ್ನೊಂದು ಅತೀ ಹತ್ತಿರದ ಗಂದೇರ್ಬಾಲ್ ಜಿಲ್ಲೆಯ ಬಲ್ಟಾಲ್ ದಾರಿಯ ಮೂಲಕ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಯಾತ್ರೆ ಸಂದರ್ಭ ಹೆದ್ದಾರಿ ಸಹಿತ ಒಳನಾಡು, ಅಂತಾರಾಷ್ಟ್ರೀಯ ಗಡಿ ರೇಖೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಅಗತ್ಯ ಇರುವ ಭದ್ರತಾ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಪೊಲೀಸ್, ಸೇನೆ, ಬಿಎಸ್ಎಫ್, ಸಿಆರ್ಪಿಎಫ್, ಸಿಎಪಿಎಫ್ ಇಲ್ಲಿ ಜಂಟಿ ಸಭೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು-ಸಾಂಬಾ-ಕಥುವಾ ವಲಯದ ಡಿಐಜಿಪಿ ಸುಜಿತ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಗಡಿ ರೇಖೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಗಡಿ ನಿಯಂತ್ರಣ ಹಾಗೂ ಭದ್ರತಾ ಗ್ರಿಡ್ಗಳನ್ನು ಸಬಲಗೊಳಿಸುವಂತೆ ಅವರು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.