ಪತ್ನಿ, ಮಕ್ಕಳ ಎದುರಲ್ಲೇ ಸಹೋದರನನ್ನು ಕೊಂದ !
ಹೊಸದಿಲ್ಲಿ, ಮೇ 5: ಅನೈತಿಕ ಸಂಬಂಧ ಹೊಂದಿರುವ ಹಾಗೂ ಅದಕ್ಕಾಗಿ ಕುಟುಂಬದ ಸೊತ್ತನ್ನು ಪೋಲು ಮಾಡುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಿತನಾದ 34 ವರ್ಷದ ವ್ಯಕ್ತಿಯೋರ್ವ ತನ್ನ ಕಿರಿಯ ಸಹೋದರನನ್ನು ಆತನ ಪತ್ನಿ ಹಾಗೂ ಮಕ್ಕಳ ಎದುರಲ್ಲೇ ಗುಂಡು ಹಾರಿಸಿ ಹತ್ಯೆಗೈದ ಘಟನೆ ದ್ವಾರಕಾದ ಜಫರ್ಪುರ ಕಲನ್ನಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅನೈತಿಕ ಸಂಬಂಧ ಹಾಗೂ ಅದಕ್ಕಾಗಿ ಐಷಾರಾಮಿಯಾಗಿ ಜೀವಿಸಲು ಕುಟುಂಬದ ಸೊತ್ತನ್ನು ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡ ತಮ್ಮ ಶಿವಕುಮಾರ್ ಮೇಲೆ ಅಣ್ಣ ಮನೋಜ್ ಯಾದವ್ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಮನೆಗೆ ನುಗ್ಗಿದ ಮನೋಜ್ ಪಿಸ್ತೂಲ್ ತೋರಿಸಿ ಶಿವನನ್ನು ಬೆದರಿಸಿದ. ಆತನ ಕತ್ತಿನ ಪಟ್ಟಿ ಹಿಡಿದು ಹೊರಗೆ ಎಳೆದುಕೊಂಡು ಬಂದ. ಕುಟುಂಬದವರು ಸಮಾಧಾನ ಪಡಿಸಿದರೂ ಕೇಳದೆ ಶಿವನ ಮೇಲೆ ಗುಂಡು ಹಾರಿಸಿದ. ಗಂಭೀರ ಗಾಯಗೊಡ ಶಿವನನ್ನು ಕೂಡಲೇ ರಾವ್ ತುಲಾ ರಾಮ್ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಎಂದು ಅವರು ಹೇಳಿದ್ದಾರೆ.
ಮನೋಜ್ನನ್ನು ಶುಕ್ರವಾರ ರಾತ್ರಿ ಬಂಧಿಸಲಾಯಿತು. ‘‘ಶಿವನಿಗೆ ಹಲವು ಹೆಂಗಸರೊಂದಿಗೆ ಅನೈತಿಕ ಸಂಬಂಧ ಇತ್ತು. ಆತ ಸೊತ್ತನ್ನು ಕಳೆದುಕೊಳ್ಳುವ ಭೀತಿ ಕುಟುಂಬಕ್ಕೆ ಇತ್ತು’’ ಎಂದು ಮನೋಜ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮನೋಜ್ ಆಸ್ತಿ ಮಾರಾಟಗಾರ ಹಾಗೂ ಈ ಹಿಂದೆ ಈತ ಗಲಭೆ ಹಾಗೂ ಶಸ್ತ್ರಾಸ್ತ ಕಾಯ್ದೆ ಅಡಿ ಬಂಧತನಾಗಿದ್ದ ಎಂದು ಅವರು ತಿಳಿಸಿದ್ದಾರೆ.