ಮೋದಿ ಆರೋಪವನ್ನು ತಿರಸ್ಕರಿಸಿದ ಅಮೇಠಿಯ ಆಸ್ಪತ್ರೆ
ರಾಹುಲ್ ಗಾಂಧಿಯನ್ನು ಟೀಕಿಸಿ ಭಾಷಣ
ಅಮೇಠಿ(ಉ.ಪ್ರ),ಮೇ 5: ವೈದ್ಯಕೀಯ ನೆರವಿನ ಅಗತ್ಯವಿದ್ದ ವ್ಯಕ್ತಿಯೋರ್ವನನ್ನು ಆತ ಕೇಂದ್ರದ ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿ ಎಂಬ ಕಾರಣಕ್ಕಾಗಿ ತಾವು ವಾಪಸ್ ಕಳುಹಿಸಿದ್ದೆವು ಎಂಬ ಆರೋಪಗಳನ್ನು ಇಲ್ಲಿಯ ಸಂಜಯ ಗಾಂಧಿ ಆಸ್ಪತ್ರೆಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಈ ಆರೋಪಗಳನ್ನು ಮಾಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು,ರಾಹುಲ್ ಆಸ್ಪತ್ರೆಯ ಟ್ರಸ್ಟಿಯಾಗಿದ್ದಾರೆ ಎಂದು ಬೆಟ್ಟು ಮಾಡಿದ್ದರು.
ಇದೊಂದು ಆಧಾರರಹಿತ ಆರೋಪವಾಗಿದೆ.ನಾವು ಈಗಾಗಲೇ ಆಯುಷ್ಮಾನ ಯೋಜನೆಯಡಿ 200 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ಸಂಜಯ ಗಾಂಧಿ ಆಸ್ಪತ್ರೆಯ ನಿರ್ದೇಶಕ ಎಸ್.ಎಂ. ಚೌಧರಿ ಅವರು ತಿಳಿಸಿದರು.
ರೋಗಿಯ ಸಂಬಂಧಿಗಳು ಆಸ್ಪತ್ರೆಯ ವಿರುದ್ಧ ಆರೋಪವನ್ನು ಮಾಡುತ್ತಿರುವ ವೀಡಿಯೊವನ್ನು ಇರಾನಿ ತನ್ನ ಟ್ವಿಟರ್ ಪೇಜ್ನಲ್ಲಿ ಪೋಸ್ಟ್ ಮಾಡಿದಾಗ ಮೊದಲ ಬಾರಿ ವಿವಾದ ಹೆಡೆಯೆತ್ತಿತ್ತು. ಅನಾರೋಗ್ಯದಿಂದ ನರಳುತ್ತಿದ್ದ ತನ್ನ ಚಿಕ್ಕಪ್ಪನ ಆಯುಷ್ಮಾನ್ ಕಾರ್ಡ್ನ್ನು ಆಸ್ಪತ್ರೆಯ ಸಿಬ್ಬಂದಿಗಳು ತಿರಸ್ಕರಿಸಿದ್ದರು. ಆಸ್ಪತ್ರೆಯು ರಾಹುಲ್ಗೆ ಸೇರಿದೆಯೇ ಹೊರತು ಆದಿತ್ಯನಾಥ್ ಅಥವಾ ಮೋದಿಗೆ ಅಲ್ಲ ಎಂದು ಅವರು ಕಾರಣ ನೀಡಿದ್ದರು ಎಂದು ವ್ಯಕ್ತಿಯೋರ್ವ ಹೇಳುತ್ತಿರುವುದನ್ನು ವೀಡಿಯೊ ತೋರಿಸಿತ್ತು. ವೈದ್ಯಕೀಯ ನೆರವು ಸಿಗದೆ ತನ್ನ ಚಿಕ್ಕಪ್ಪ ಎ.26ರಂದು ತೀರಿಕೊಂಡಿದ್ದಾನೆ ಎಂದೂ ಆತ ಹೇಳಿದ್ದ. ಆಸ್ಪತ್ರೆಯ ಸಿಬ್ಬಂದಿಗಳು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ಇರಾನಿ ಬರೆದಿದ್ದರು.
ರವಿವಾರ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ ಈ ಆರೋಪವನ್ನು ಪುನರುಚ್ಚರಿಸಿದ್ದರು.‘ಅಮೇಠಿಯಲ್ಲಿ ಆಸ್ಪತ್ರೆಯೊಂದಿದ್ದು ಅದರ ಟ್ರಸ್ಟಿ ‘ನಾಮದಾರ್’ ಕುಟುಂಬದ ವ್ಯಕ್ತಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಡವ್ಯಕ್ತಿಯೋರ್ವ ತನ್ನ ಆಯುಷ್ಮಾನ್ ಕಾರ್ಡ್ ಹಿಡಿದುಕೊಂಡು ಅಲ್ಲಿಗೆ ಚಿಕಿತ್ಸೆಗೆ ತೆರಳಿದ್ದ, ಆದರೆ ಆತ ನನ್ನ ಸರಕಾರ ನೀಡಿದ್ದ ಕಾರ್ಡ್ನ್ನು ಹೊಂದಿದ್ದರಿಂದ ಆತನಿಗೆ ಚಿಕಿತ್ಸೆ ನಿರಾಕರಿಸಲಾಗಿತ್ತು’್ತ ಎಂದು ಮೋದಿ ಹೇಳಿದ್ದರು.