ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಿಂದ ಶೆಲ್, ಗುಂಡಿನ ದಾಳಿ
ಶ್ರೀನಗರ, ಮೇ 5: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಹಾಗೂ ರಾಜೌರಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿರುವ ಮುಂಚೂಣಿ ಠಾಣೆ ಹಾಗೂ ಗ್ರಾಮಗಳ ಮೇಲೆ ಪಾಕಿಸ್ತಾನ ಸೇನೆ ರವಿವಾರ ಮೋರ್ಟಾರ್ ಹಾಗೂ ಗುಂಡಿನ ದಾಳಿ ನಡೆಸಿದೆ.
ರಾಜೌರಿಯ ಕೇರಿ ವಲಯ ಹಾಗೂ ಪೂಂಚ್ನ ಕೃಷ್ಣ ಘಾಟಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತು. ಆದರೆ, ಭಾರತೀಯ ಸೈನಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ಈ ದಾಳಿಗೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವಾರಗಳ ಕಾಲ ಪಾಕಿಸ್ತಾನದ ಕಡೆಯಿಂದ ಯಾವುದೇ ದಾಳಿ ಇರಲಿಲ್ಲ. ಮೇ 2ರಂದು ಪಾಕಿಸ್ತಾನ ಸೇನೆ ಪೂಂಚ್ನ ಶಹಾಪುರ ಹಾಗೂ ಕಿರ್ನಿ ವಲಯವನ್ನು ಗುರಿಯಾಗಿರಿಸಿ ದಾಳಿ ನಡೆಸಿತ್ತು. ಮರು ದಿನ ಅದೇ ಜಿಲ್ಲೆಯ ಕಸ್ಬಾ ವಲಯವನ್ನು ಗುರಿಯಾಗಿರಿಸಿ ದಾಳಿ ನಡೆಸಿತ್ತು.
Next Story