ಯಾವುದೇ ಭವಿಷ್ಯ ನುಡಿಯಲು ಸಾಧ್ಯವಿಲ್ಲ: ಲಕ್ನೋದಲ್ಲಿ ಮತ ಚಲಾಯಿಸಿ ರಾಜನಾಥ್ ಸಿಂಗ್
ಲಕ್ನೋ, ಮೇ 6: “ನನಗೆ ಯಾವುದೇ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ನಿರ್ಧಾರವನ್ನು ಲಕ್ನೋ ಮತದಾರರಿಗೆ ಬಿಟ್ಟು ಬಿಡುತ್ತೇನೆ''…. ಹೀಗೆಂದು ಹೇಳಿದವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.
ತಾವು ಮರು ಆಯ್ಕೆ ಬಯಸಿ ಸ್ಪರ್ಧಿಸುತ್ತಿರುವ ಪ್ರತಿಷ್ಠಿತ ಲಕ್ನೋ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಇಂದು ಮತ ಚಲಾಯಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಮೇಲಿನಂತೆ ಹೇಳಿದರು. ರಾಜನಾಥ್ ಈ ಬಾರಿ ನಟ ಶತ್ರುಘ್ನ ಸಿನ್ಹಾ ಅವರ ಪತ್ನಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪೂನಂ ಸಿನ್ಹಾ ಅವರನ್ನು ಎದುರಿಸುತ್ತಿದ್ದಾರೆ. ಆದರೆ ಸಮಾಜವಾದಿ ಪಕ್ಷ ಲಕ್ನೋದಲ್ಲಿ ಇಲ್ಲಿಯ ತನಕ ಗೆಲುವು ಸಾಧಿಸಿಲ್ಲ.
“ತಮಗೆ ಯಾರು ಬೇಕೋ ಅವರನ್ನು ಆರಿಸುವ ಸಂಪೂರ್ಣ ಹಕ್ಕು ಜನರಿಗಿದೆ, ಏನಿದ್ದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ'' ಎಂದು ಸಿಂಗ್ ಹೇಳಿದರು.
``ಮಹಾಮೈತ್ರಿ ಕೂಟ ಇಲ್ಲಿ ಬಿಜೆಪಿಗೆ ಯಾವುದೇ ಸವಾಲೊಡ್ಡಿಲ್ಲ. ನಾನು ಎದುರಾಳಿ ಅಭ್ಯರ್ಥಿಯ ಬಗ್ಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಈ ಚುನಾವಣೆಗಳು ವ್ಯಕ್ತಿಗಳ ಬಗ್ಗೆ ಅಲ್ಲ ವಿಚಾರಗಳ ಬಗ್ಗೆ ಎಂದು ನಾನು ನಂಬಿದ್ದೇನೆ'' ಎಂದರು.